ಮಂಗಳೂರು: ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವಲ್ಲಿ ವಿಫಲರಾಗಿ ಬಳಿಕ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಹಾಗೂ ಪುಟ್ಟ ಬಾಲಕಿಯನ್ನು ರಕ್ಷಿಸುವಲ್ಲಿ ಮಂಗಳೂರಿನ ಪಣಂಬೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಅಂಬಿಕ ನಗರ ನಿವಾಸಿ ರಾಜೇಶ್ ಮತ್ತು ಆತನ ನಾಲ್ಕು ವರ್ಷದ ಮಗಳು ರಕ್ಷಿಸಲ್ಪಟ್ಟವರು.

ರಾಜೇಶ್ ಅವರು ದಾಂಪತ್ಯ ಜೀವನದ ಕಲಹದಿಂದ ಬೇಸತ್ತು ಮಗಳೊಂದಿಗೆ ಸಮುದ್ರ ತೀರಕ್ಕೆ ತೆರಳಿ “ನಾವಿಬ್ಬರೂ ಸಾಯೋಣ” ಎಂದು ಹೇಳುತ್ತಾ ವಿಡಿಯೋ ಮಾಡಿ ಸಂಬಂಧಿಕರ ಗ್ರೂಪ್ಗೆ ಕಳುಹಿಸಿದ್ದರು. ಇದು ಸಂಬಂಧಿಕರಿಂದ ಒಬ್ಬರಿಗೊಬ್ಬರು ಕಳುಹಿಸಿ ಈ ವೀಡಿಯೊ ಪಣಂಬೂರು ಪೊಲೀಸರಿಗೆ ತಲುಪುತ್ತಿದ್ದಂತೆಯೇ ಅವರು ಚುರುಕಾಗಿ ಹುಡುಕಾಟ ಆರಂಭಿಸಿದರು.

ವೀಡಿಯೊದ ಆಧಾರದ ಮೇಲೆ ಸೈಬರ್ ಕ್ರೈಂ ಪೊಲೀಸರ ಸಹಕಾರದಿಂದ ಲೊಕೇಶನ್ ಪತ್ತೆಮಾಡಿದ ಪೊಲೀಸರು ಕಾವೂರು ಶಾಂತಿನಗರಕ್ಕೆ ಧಾವಿಸಿದರು. ಅಲ್ಲಿ ರಾಜೇಶ್ ಮನೆ ಬಾಗಿಲು ಹಾಕಿಕೊಂಡಿದ್ದರಿಂದ ಪೊಲೀಸರು ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ, ಆತ ಮಗಳೊಂದಿಗೆ ನೇಣು ಹಾಕಿಕೊಳ್ಳಲು ಸಿದ್ಧತೆ ಮಾಡುತ್ತಿದ್ದಾನೆಂಬುದು ಕಂಡುಬಂದಿತು. ಕೂಡಲೇ ಇಬ್ಬರನ್ನೂ ಸುರಕ್ಷಿತವಾಗಿ ರಕ್ಷಿಸಿ ಕಾವೂರು ಠಾಣೆಗೆ ಒಪ್ಪಿಸಲಾಯಿತು. ಬಳಿಕ ಗಂಡ-ಹೆಂಡತಿಗೆ ಬುದ್ಧಿವಾದ ನೀಡಿ ಮನೆಗೆ ಕಳುಹಿಸಲಾಯಿತು.




