ಬೆಂಗಳೂರು: ಕೇವಲ ಎರಡೇ ದಿನಗಳಲ್ಲಿ 48 ಕೋಟಿ ರೂಪಾಯಿ ಕದ್ದ ಸೈಬರ್ ಕದೀಮರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ರಶೀದ್ ಅತ್ತರ್ (27) ಮತ್ತು ಸಂಜಯ್ ಪಟೇಲ್ (43) ಎಂದು ಗುರುತಿಸಲಾಗಿದೆ.

ಆ. 6 ಮತ್ತು 7, 2025 ರಂದು ಕಂಪನಿಯೊಂದರ ಅಕೌಂಟ್ನಿಂದ ಹಲವಾರು ಅನಧಿಕೃತ ಹಣ ವರ್ಗಾವಣೆ ನಡೆದಿದ್ದು, ಕೇವಲ ಎರಡು ದಿನಗಳಲ್ಲಿ ವಂಚಕರು 48 ಕೋಟಿ ರೂಪಾಯಿ ಹ್ಯಾಕ್ ಮಾಡುವ ಮೂಲಕ ಕದ್ದಿದ್ದಾರೆ.
ಆರೋಪಿಗಳು ವಿಸ್ಡಮ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಅಕೌಂಟ್ನಿಂದ ಹಣವನ್ನು ವಿದೇಶದಲ್ಲಿರುವ ವಿವಿಧ ಅಕೌಂಟ್ಗಳಿಗೆ ವರ್ಗಾವಣೆ ಮಾಡಿದ್ದರು ಎನ್ನಲಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ಒಟ್ಟು 1,782 ಹಣ ವರ್ಗಾವಣೆಗಳನ್ನು 656 ವಿಭಿನ್ನ ಬ್ಯಾಂಕ್ ಅಕೌಂಟ್ಗಳಿಗೆ ಮಾಡಿದ್ದಾರೆ. ಇದರಲ್ಲಿ 27.39 ಲಕ್ಷ ರೂಪಾಯಿಯನ್ನು ಒಬ್ಬ ವ್ಯಕ್ತಿಯ SBI ಅಕೌಂಟ್ ಗೆ ವರ್ಗಾವಣೆ ಮಾಡಿದ್ದು, ಆತನನ್ನೂ ಪೊಲೀಸರು ಬಂಧಿಸಿದ್ದಾರೆ.

ದುಬೈಯಲ್ಲಿರುವ ವ್ಯಕ್ತಿಯೊಬ್ಬ ಹಾಂಗ್ ಕಾಂಗ್ನ ಸೈಬರ್ ವಂಚಕರನ್ನು ಬಾಡಿಗೆ ಪಡೆದು ಈ ಕೃತ್ಯವನ್ನು ಎಸಗಿಸಿದ್ದಾನೆ ಎಂದು ತಿಳಿದು ಬಂದಿದೆ.



