ಮಂಗಳೂರು: ಸ್ಟೀಯರಿಂಗ್ ಗೇರ್ ದೋಷದಿ೦ದಾಗಿ ನಿಯಂತ್ರಣ ತಪ್ಪಿದ್ದ ದೋಣಿಯಲ್ಲಿ ಅಪಾಯಕ್ಕೆ ಸಿಲುಕಿದ್ದ 31 ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ಮಂಗಳೂರಿನಲ್ಲಿ ಅ. 25 ರಂದು ನಡೆದಿದೆ.

ಗೋವಾ ಮೂಲದ ‘ಐಎಫ್ಬಿ ಸಂತ್ ಆಂಟನ್-ಐ’ ಎಂಬ ದೋಣಿಯು ತಾಂತ್ರಿಕ ದೋಷದಿಂದಾಗಿ ಮಂಗಳೂರಿನ ಕರಾವಳಿಯಿಂದ ಸುಮಾರು 100 ನಾಟಿಕಲ್ ಮೈಲು ದೂರದಲ್ಲಿ 11 ದಿನಗಳಿಂದ ದಿಕ್ಕಿಲ್ಲದೆ ತೇಲಾಡುತ್ತಿದ್ದು, ದೋಣಿಯು ಸಮುದ್ರದಲ್ಲಿ ನಿಯಂತ್ರಣ ಕಳೆದುಕೊ೦ಡಿತ್ತು.

ಕೋಸ್ಟ್ ಗಾರ್ಡ್ ಸಿಬ್ಬಂದಿ ಸಂಕಷ್ಟದಲ್ಲಿದ್ದ ಮೀನುಗಾರಿಕಾ ದೋಣಿಯನ್ನು ತಲುಪಿ, ತಾಂತ್ರಿಕ ಮತ್ತು ಲಾಜಿಸ್ಟಿಕ್ ನೆರವು ಒದಗಿಸಿ, ಸಮುದ್ರದಲ್ಲಿಯೇ ಸ್ಟೀರಿಂಗ್ ದೋಷವನ್ನು ಸರಿಪಡಿಸಿದರು. ದುರಸ್ತಿ ಕಾರ್ಯ ಪೂರ್ಣಗೊಂಡ ನಂತರ, ದೋಣಿಯನ್ನು ಸುರಕ್ಷಿತವಾಗಿ ಹೊನ್ನಾವರ ಮೀನುಗಾರಿಕಾ ಬಂದರಿಗೆ ಎಳೆದು ತರುವಲ್ಲಿ ಯಶಸ್ವಿಯಾಗಿದ್ದಾರೆ.




