ಮಂಗಳೂರು: ಕಾರಿನೊಂದಿಗೆ ಅಪಘಾತಕ್ಕೀಡಾಗಿ ರಸ್ತೆ ಬದಿಯೇ ನಿಂತಿದ್ದ ಲಾರಿಗೆ ಮತ್ತೊಂದು ಕಂಟೈನರ್ ಲಾರಿ ಢಿಕ್ಕಿ ಹೊಡೆದಿದ್ದು, ಭಾರೀ ಅನಾಹುತವೊಂದು ತಪ್ಪಿದ ಘಟನೆ ಮಂಗಳೂರು ನಗರದ ಕುಂಟಿಕಾನ ಸಮೀಪ ಅ.23 ರಂದು ನಡೆದಿದೆ.

ಇಂದು ಬೆಳಿಗ್ಗೆ ಸ್ವಿಫ್ಟ್ ಕಾರು ಹಾಗೂ ಲಾರಿ ಮಧ್ಯೆ ಅಪಘಾತಕ್ಕೀಡಾಗಿ ಸ್ವಿಫ್ಟ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಲಾರಿ ಕೆಟ್ಟು ಹೋಗಿದ್ದು ಅದನ್ನು ತೆರವುಗೊಳಿಸದೇ ರಸ್ತೆ ಬದಿಯೇ ನಿಲ್ಲಿಸಲಾಗಿತ್ತು.

ಇದೇ ಸಂದರ್ಭ ಕಂಟೈನರ್ ಲಾರಿಯೊಂದು ಬಂದಿದ್ದು, ಎದುರು ನಿಂತ ಲಾರಿ ಕೆಟ್ಟು ನಿಂತಿರುವುದು ಅರಿವಿಗೆ ಬಾರದೆ ಲಾರಿಯನ್ನು ನಿಂತಿದ್ದ ಲಾರಿಯ ಇನ್ನೊಂದು ಬದಿಗೆ ಡ್ರೈವರ್ ನುಗ್ಗಿಸಿದ್ದಾನೆ. ಇದರಿಂದ ಲಾರಿ ಡಿವೈಡರ್ ಏರಿ ಲಾರಿಯ ಪಕ್ಕದಲ್ಲಿಯೇ ಢಿಕ್ಕಿ ಹೊಡೆದು ರಸ್ತೆ ಬದಿಗೆ ನಿಂತಿದ್ದು, ವಾಹನಗಳು ಸಾಗಲಾಗದೆ ಟ್ರಾಫಿಕ್ ಜಾಂ ಉಂಟಾಗಿದೆ.

ಅಪಘಾತಕ್ಕೀಡಾದ ಲಾರಿಯನ್ನು ತೆರವುಗೊಳಿಸದಿರುವುದು, ಲಾರಿ ಅಪಘಾತಕ್ಕೀಡಾಗಿದ ಬಗ್ಗೆ ಸ್ಥಳದಲ್ಲಿ ಯಾವುದೇ ಸಂಕೇತಗಳನ್ನು ನೀಡದಿರುವುದು ಹಾಗೂ ಕಂಟೈನಲ್ ಲಾರಿ ಚಾಲಕನ ಅಜಾರೂಕತೆಯೇ ಈ ದುರ್ಘಟನೆಗೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.



