ಬೆಂಗಳೂರು: ಬೆಂಗಳೂರಿನ ಶ್ರೀರಾಮಪುರ ರೈಲ್ವೇ ಟ್ರ್ಯಾಕ್ ಬಳಿ ಪಾಗಲ್ ಪ್ರೇಮಿಯೊಬ್ಬ ಕಾಲೇಜು ವಿದ್ಯಾರ್ಥಿನಿಯನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.
ಮೃತ ಯುವತಿಯನ್ನು ಯಾಮಿನಿ ಪ್ರಿಯ (20) ಎಂದು ಗುರುತಿಸಲಾಗಿದೆ.

ಬನಶಂಕರಿಯ ಕಾಲೇಜಿನಲ್ಲಿ ಬಿ ಫಾರ್ಮಸಿ ಓದುತ್ತಿದ್ದ ಯಾಮಿನಿ ಪ್ರಿಯಾ ಮಧ್ಯಾಹ್ನ ಪರೀಕ್ಷೆ ಮುಗಿಸಿಕೊಂಡು ಮಲ್ಲೇಶ್ವರದ ಮಂತ್ರಿ ಮಾಲ್ ಬಳಿ ಇಳಿದು ರೈಲ್ವೆ ಟ್ರ್ಯಾಕ್ ಬಳಿ ಮನೆಗೆ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ವಿಘ್ನೇಶ್ ಕಣ್ಣಿಗೆ ಖಾರದ ಪುಡಿ ಹಾಕಿ ಕತ್ತುಕೊಯ್ದು ಕೊಲೆ ಮಾಡಿ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದರಿಂದ ಯಾಮಿನಿ ಪ್ರಿಯ ಕುತ್ತಿಗೆ ಹಾಗೂ ಮುಖದ ಭಾಗಕ್ಕೆ ತೀವ್ರ ಗಾಯಗಳಾಗಿದ್ದು ಯಾಮಿನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ಘಟನೆಯ ಕುರಿತು ಮಾಹಿತಿ ತಿಳಿದ ಶ್ರೀರಾಂಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ವಿಘ್ನೇಶ್ ಕೆಲ ವರ್ಷಗಳಿಂದ ಯಾಮಿನಿ ಪ್ರಿಯ ಹಿಂದೆ ಬಿದ್ದು ಪ್ರೀತಿ ಮಾಡುವಂತೆ ಒತ್ತಾಯಿಸುತ್ತಿದ್ದ. ಒಮ್ಮೆ ಈಕೆಗೆ ಬಲವಂತವಾಗಿ ತಾಳಿ ಕೂಡ ಕಟ್ಟಿದ್ದ. ಇಷ್ಟವಿಲ್ಲದ ಯಾಮಿನಿ ತಾಳಿ ಕಿತ್ತೆಸೆದು ಈತನನ್ನ ದೂರ ಇಟ್ಟಿದ್ದಳು. ಈತನ ಮೇಲೆ ಈ ಹಿಂದೆ ಮಾರ್ಕೆಟ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ.


