ಪುತ್ತೂರು: ಪಂಚೇಂದ್ರಿಯವನ್ನು ಹತೋಟಿಯಲ್ಲಿ ಇಡುವ ಕಾರ್ಯ ಮಾಡಬೇಕಾಗಿದ್ದು, ತರಬೇತಿ ಮೂಲಕ ಇದನ್ನು ಯಶಸ್ವಿಯಾಗಿಸಬಹುದು. ಮದ್ಯ ವ್ಯಸನ ಮುಕ್ತವಾಗುವುದರಿಂದ ಸಂಸಾರಕ್ಕೆ ನೆಮ್ಮದಿ ನೀಡುತ್ತದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.

ಪುತ್ತೂರಿನ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಬುಧವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ವತಿಯಿಂದ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿಸ್ಮೃತಿ ಮತ್ತು ಬೃಹತ್ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಮಾನಸಿಕ ಒತ್ತಡದ ನಿವಾರಣೆಗೆ ಮದ್ಯಪಾನ ಯಾವತ್ತಿಗೂ ಪರಿಹಾರವಲ್ಲ. ಸಮಾಜದಲ್ಲಿ ಮದ್ಯವ್ಯಸನಿಗಳನ್ನು ಈ ವ್ಯಸನದಿಂದ ದೂರ ಮಾಡುವುದು ಪುಣ್ಯದ ಕಾರ್ಯವಾಗಿದೆ. ಬೇರೆ ಎಲ್ಲಾ ಕೊಡುಗೆಗಳಿಂದಲೂ ನನಗೆ ತೃಪ್ತಿ ತಂದ ಕಾರ್ಯ ಮದ್ಯಪಾನ ವರ್ಜನಾ ಶಿಬಿರಗಳು. ಇದರಿಂದ ಲಕ್ಷಾಂತರ ಮಂದಿ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಇದು ಸಮಾಜಕ್ಕೆ ಪ್ರೇರಣೆ ನೀಡುವ ಕೆಲಸವಾಗಿದೆ. ಸಿನಿಮಾ, ನಾಟಕಗಳಲ್ಲಿ ಈ ಕುಡುಕರೇ ಹಾಸ್ಯಗಾರರು. ಆದರೆ ಕುಡುಕರು ಎಚ್ಚೆತ್ತುಕೊಳ್ಳದಿದ್ದರೆ ಬದುಕು ಹಾಸ್ಯಾಸ್ಪದವಾಗುತ್ತದೆ. ಧರ್ಮಸ್ಥಳ ಯೋಜನೆಯಿಂದ ವ್ಯಸನಮುಕ್ತರಾದ ನವಜೀವನ ಸಮಿತಿಯ 1 ಸಾವಿರ ಸದಸ್ಯರಿಗೆ ಸ್ವಉದ್ಯೋಗ ತರಬೇತಿಯನ್ನು ನೀಡಲಾಗಿದೆ. ಗಾಂಧಿ ಕಲ್ಪನೆಯ ವ್ಯಸನಮುಕ್ತ ಸಮಾಜದ ಹಾದಿಯಲ್ಲಿ ಹಮ್ಮಿಕೊಂಡ ದುಶ್ಚಟಮುಕ್ತ ಸಮಾಜ ನಿರ್ಮಾಣ ಜನಪರ ಕಾಳಜಿಯ ಕೆಲಸ ಎಂದು ಅವರು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್ ಅವರು ಆಶಯ ಭಾಷಣ ಮಾಡಿದರು. ಪಾನಮುಕ್ತ ನವಜೀವನ ಸಮಿತಿಯ ಕೆ. ಭಾಸ್ಕರ ಮೂಲ್ಯ ಕೆದಿಲ, ಶೈಲಜಾ ವಸಂತ ಬನ್ನೂರು ಅನಿಸಿಕೆ ವ್ಯಕ್ತಪಡಿಸಿದರು. ಬನ್ನೂರು ಶಾಲಾ ಆವರಣ ಗೋಡೆ ನಿರ್ಮಾಣಕ್ಕೆ ಅನುದಾನ, ಆರ್ಯಾಪು ಸುಶೀಲ ಅವರಿಗೆ ಮಾಸಾಶನ, ಪ್ರತೀಕ್ಷಾ ಅವರಿಗೆ ಶಿಷ್ಯವೇತನ, ಅಝ್ವಿನಾ, ಸಮೀಕ್ಷಾ ಸುಜ್ಞಾನ ನಿಧಿ, ಸಂಕಮ್ಮ ಅವರ ಕುಟುಂಬಕ್ಕೆ ಸಲಕರಣೆ ವಿತರಣೆ ಮಾಡಲಾಯಿತು. ರಾಜ್ಯದಲ್ಲಿ ಪಾನನಿಷೇಧ ಜಾರಿಗೆ ತರಬೇಕು. ಮದ್ಯಪಾನದ ಕುರಿತು ಮಕ್ಕಳಿಗೆ ಜಾಗೃತಿಶಿಕ್ಷಣ ನೀಡಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಬಾರ್ ಹಾಗೂ ಮದ್ಯದಂಗಡಿಗಳಿಗೆ ಅವಕಾಶ ನೀಡಬಾರದು ಮತ್ತಿತರ ಬೇಡಿಕೆಯ ಠರಾವು ಮಂಡಿಸಿ, ಸರ್ಕಾರಕ್ಕೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ಎಂಎಲ್ ಸಿ ಕಿಶೋರ್ ಕುಮಾರ್ ಬೊಟ್ಯಾಡಿ, ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾಧ್ಯಕ್ಷ ನಟರಾಜ ಬಾದಾಮಿ, ಪುತ್ತೂರು ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಮಾಜಿ ಜಿಲ್ಲಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಮುಖರಾದ ಎಸಿ ಭಂಡಾರಿ, ಶಶಿಕುಮಾರ್ ಬಾಲ್ಯೊಟ್ಟು, ರವಿ ಮುಂಗ್ಲಿಮನೆ, ವಸಂತ ಸಾಲಿಯಾನ್, ಲೋಕೇಶ್ ಹೆಗ್ಡೆ, ವಿವಿಧ ತಾಲೂಕು ಅಧ್ಯಕ್ಷರಾದ ಮಹೇಶ್ ಸವಣೂರು, ಲೋಕನಾಥ, ಖಾಸಿಂ, ರೊನಾಲ್ಡ್,ಅಖಿಲೇಶ್,ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ,ಜಿಲ್ಲಾ ನಿರ್ದೇಶಕ ಬಾಬು ನಾಯ್ಕ, ಜಯಪ್ರಕಾಶ್, ಸುಭಾಶ್ಚಂದ್ರ, ಮಹಮ್ಮದ್ ಇಸ್ಮಾಯಿಲ್, ರಾಮಚಂದ್ರ, ಶಾರದಾ ಉಪಸ್ಥಿತರಿದ್ದರು.



