Breaking
23 Mar 2026, Mon

ಮಂಗಳೂರಿನ ಜನತಾ ಡಿಲಕ್ಸ್ ಮಾಲಕ ಪತ್ತುಮುಡಿ ಸೂರ್ಯನಾರಾಯಣ್ ರಾವ್ ನಿಧನ

ಮಂಗಳೂರು: ನಗರದ ಜನತಾ ಡಿಲಕ್ಸ್ ಹೊಟೇಲ್ ಮಾಲಕ, ಉದ್ಯಮಿ ಪತ್ತುಮುಡಿ ಸೂರ್ಯನಾರಾಯಣ ರಾವ್ ಅವರು (72) ಅ.10 ರಂದು ನಿಧನರಾದರು.

ಸಣ್ಣ ವಯಸ್ಸಿನಲ್ಲೇ ಪಾಕ ವಿದ್ಯೆಯಲ್ಲಿ ಪರಿಣಿತರಾದ ಸೂರ್ಯನಾರಾಯಣ ರಾವ್ ಅವರು ಹೈಸ್ಕೂಲ್ ವಿದ್ಯಾಭ್ಯಾಸದ ಬಳಿಕ ಅಡುಗೆ ಸಹಾಯಕರಾಗಿ, ಸಣ್ಣ ಅಂಗಡಿ ವ್ಯವಹಾರ ನಡೆಸಿ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ನಂತರ ಹೊಟೇಲ್ ಉದ್ಯಮ ಆರಂಭಿಸಿದರು.

ಮೊದಲಿಗೆ ನಗರದ ಕೆ.ಎಸ್.ರಾವ್ ರಸ್ತೆಯಲ್ಲಿ ಜನತಾ ಡಿಲಕ್ಸ್ ಹೆಸರಿನಲ್ಲಿ ಹೋಟೆಲ್ ಉದ್ಯಮ ಆರಂಭಿಸಿದರು. ಬಳಿಕ ತನ್ನ ಉದ್ಯಮವನ್ನು ವಿಸ್ತರಿಸುವ ಮೂಲಕ ಬಳ್ಳಾಲ್‌ಬಾಗ್ ಸಮೀಪ ಪತ್ತುಮುಡಿ ಸೌಧ ಎಂಬ ಸಮುಚ್ಚಯ ನಿರ್ಮಿಸಿ ಅಲ್ಲಿಯೂ ಹೋಟೆಲ್ ಉದ್ಯಮ ಹಾಗೂ ಕ್ಯಾಟರಿಂಗ್ ವ್ಯವಹಾರ ಆರಂಭಿಸಿದರು. ಉದ್ಯಮದೊಂದಿಗೆ ಧಾರ್ಮಿಕ, ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡ ಅವರು ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.

ಸೂರ್ಯನಾರಾಯಣ ರಾವ್ ಅವರು ರಾಜ್ಯ ಹೊಟೇಲ್ ಮಾಲಕರ ಸಂಘದ ಆತಿಥ್ಯ ರತ್ನ ಪುರಸ್ಕಾರ, ಸಾಹಿತ್ಯ ಸಮ್ಮೇಳನದಲ್ಲಿ ಅತ್ಯುತ್ಯಮ ಹೊಟೇಲ್ ಮತ್ತು ಕ್ಯಾಟರರ್ಸ್ ಪುರಸ್ಕಾರ ಪಡೆದಿದ್ದಾರೆ. ಲಯನ್ಸ್ ಸೇವಾ ಸಂಸ್ಥೆ ಮಂಚಿ ಘಟಕ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಹೊಟೇಲ್ ಮಾಲಕರ ಸಂಘದ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿದ್ದರು.

ಮೃತರು ಪತ್ನಿ, ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *