ಶಿವಮೊಗ್ಗ: ಜಗಳ ಬಿಡಿಸಲು ಹೋದ ಹೆಡ್ ಕಾನ್ಸ್ಟೇಬಲ್ ಮೇಲೆಯೇ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಅ.5 ರ ರಾತ್ರಿ ಶಿವಮೊಗ್ಗದ ಭದ್ರಾವತಿಯಲ್ಲಿ ನಡೆದಿದೆ.
ಭದ್ರಾವತಿಯಲ್ಲಿ ಗಣಪತಿ ವಿಸರ್ಜನೆ ನಡೆಯುತ್ತಿದ್ದ ವೇಳೆ ಯುವಕರ ಗುಂಪು ಗಲಾಟೆ ನಡೆಸುತ್ತಿತ್ತು.

ಈ ವೇಳೆ ಜಗಳ ಬಿಡಿಸಲು ತೆರಳಿದ ಭದ್ರಾವತಿಯ ಪೇಪರ್ ಟೌನ್ ಠಾಣೆ ಹೆಡ್ ಕಾನ್ಸ್ಟೇಬಲ್ ಯಲ್ಲಪ್ಪ ಅವರ ತಲೆಯ ಹಿಂಬದಿಗೆ ಮರದ ರೀಪಿನಿಂದ ಯುವಕರ ಗುಂಪು ಹಲ್ಲೆ ಮಾಡಿದೆ.
ಹಳೇ ವೈಷಮ್ಯದ ಕಾರಣಕ್ಕೆ ಮಾಜಿ ಗ್ರಾ.ಪಂ ಮಾಜಿ ಅಧ್ಯಕ್ಷ ಕೃಷ್ಣೇಗೌಡ ಮತ್ತು ಪತ್ನಿ ಮೇಲೆ ಯುವಕರು ಹಲ್ಲೆ ಮಾಡುತ್ತಿದ್ದ ವೇಳೆ ಹೆಡ್ ಕಾನ್ಸ್ಟೇಬಲ್ ಗಲಾಟೆ ಬಿಡಿಸಲು ಹೋಗಿದ್ದಾರೆ ಎಂದು ಹೇಳಲಾಗಿದೆ.

ಹಲ್ಲೆಗೊಳಗಾದ ಬಳಿಕ ಹೆಡ್ ಕಾನ್ಸ್ಟೇಬಲ್ ಯಲ್ಲಪ್ಪ ಅವರಿಗೆ ಭದ್ರಾವತಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




