ಬಂಟ್ವಾಳ: ಪುರಸಭಾ ವ್ಯಾಪ್ತಿಯ ಜನನಿಬಿಡ ಪ್ರದೇಶಗಳಲ್ಲಿ ಬೀದಿ ನಾಯಿಗಳ ಕಾಟ ಜೋರಾಗಿದ್ದು ಸಾರ್ವಜನಿಕ ವಲಯದಲ್ಲಿ ಆತಂಕ ಮನೆ ಮಾಡಿದೆ.
ಇಲ್ಲಿನ ಕೈಕುಂಜೆ ಸಮೀಪದ ರಸ್ತೆಯಲ್ಲಿ ಸಂಜೆ ವೇಳೆ ಶಾಲೆಯಿಂದ ನಡೆದುಕೊಂಡು ಬರುವ ವಿದ್ಯಾರ್ಥಿಗಳಿಗೆ ನಾಯಿಗಳು ಕಾಟ ನೀಡುತ್ತಿವೆ ಎಂಬ ದೂರುಗಳು ಕೇಳಿಬಂದಿವೆ.

ಜೊತೆಗೆ ಕೆ.ಎಸ್.ಆರ್.ಟಿ.ಬಸ್ ನಿಲ್ದಾಣ ಒಳಗೆ ನಾಯಿಗಳ ದಂಡು ಮಲಗಿರುವುದಲ್ಲದೆ, ಇಲ್ಲಿ ಬಸ್ ಗೆ ಬರುವ ಪ್ರಯಾಣಿಕರು ಭಯದಿಂದ ನಿಲ್ಲುವ ವಾತಾವರಣ ನಿರ್ಮಾಣವಾಗಿದೆ.
ಈ ಬಗ್ಗೆ ಕಳೆದ ಪುರಸಭಾ ಮೀಟಿಂಗ್ ನಲ್ಲಿ ಚರ್ಚೆ ನಡೆದಿದ್ದು, ಸಂತಾನಹರಣ ಚಿಕಿತ್ಸೆ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ಅದರೂ ಸ್ಥಳೀಯ ಆಡಳಿತದಿಂದ ಹಾಗೂ ತಾಲೂಕು ಪಂಚಾಯತ್ ಈ ಬಗ್ಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂಬ ಆರೋಪಗಳು ಇದೀಗ ಕೇಳಿ ಬಂದಿದೆ

ರೇಬಿಸ್ ರೋಗದ ಭಯ ಕೂಡ ಅವರಿಸಿದ್ದು, ಪುರಸಭೆ ಇದರ ಬಗ್ಗೆ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಎಂದು ಪುರಸಭಾ ನಿವಾಸಿಗಳು ಮನವಿ ಮಾಡಿದ್ದಾರೆ.



