ವಿಟ್ಲ: ಬೈಕ್ ಟಯರ್ ಪಂಚರ್ ಆದ ಹಿನ್ನಲೆ ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಕಾರೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಪರ್ತಿಪ್ಪಾಡಿ ಎಂಬಲ್ಲಿ ಆ.8 ರಂದು ನಡೆದಿದೆ.
ಗಾಯಗೊಂಡವರನ್ನು ಕುಡ್ತಮುಗೇರಿನ ಪ್ರಗತಿ ಸ್ವೀಟ್ಸ್ ಬೇಕರಿಯ ಮಾಲಕ ಜಗನ್ನಾಥ ಶೆಟ್ಟಿಗಾರ್ ಎಂದು ಗುರುತಿಸಲಾಗಿದೆ.

ಜಗನ್ನಾಥ ಶೆಟ್ಟಿಗಾರ್ ಇಂದು ಬೆಳಗ್ಗೆ ಕುಡ್ತಮುಗೇರಿನಿಂದ ಪರ್ತಿಪ್ಪಾಡಿ ಕಡೆಗೆ ತೆರಳುತ್ತಿದ್ದ ವೇಳೆ ದಾರಿಮಧ್ಯೆ ಅವರ ದ್ವಿಚಕ್ರ ವಾಹನದ ಟಯರ್ ಪಂಕ್ಚರ್ ಆಗಿತ್ತು.
ಈ ಹಿನ್ನೆಲೆಯಲ್ಲಿ ತಮ್ಮ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ನಿಂತಿದ್ದರು. ಈ ವೇಳೆ ವಿಟ್ಲ ಕಡೆಯಿಂದ ಸಾಲೆತ್ತೂರಿನತ್ತ ತೆರಳುತ್ತಿದ್ದ ಕಾರೊಂದು ಅವರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಜಗನ್ನಾಥ ಶೆಟ್ಟಿಗಾರ್ ಅವರನ್ನು ಸ್ಥಳೀಯರು ದೇರಳಕಟ್ಟೆ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ವಿಟ್ಲ ಠಾಣಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.



