ಮಂಗಳೂರು: ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದ ಸಹಯೋಗದೊಂದಿಗೆ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ) ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ (ರಿ), ಇವರ ಸಂಯುಕ್ತ ಆಶ್ರಯದಲ್ಲಿ ಕುಡಾಳ್ ದೇಶ್ಕರ್ ಸಮುದಾಯದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಸತಿ ಸಹಿತ ನಾಲ್ಕು ದಿನಗಳ ಚಟುವಟಿಕೆ ಆಧಾರಿತ “ಪರಿಣತಿ” -2025′ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಮೂರನೇ ದಿನದ ಕಾರ್ಯಾಗಾರವು ಜು.2 ರಂದು ನಡೆಯಿತು.


ಸಂಪನ್ಮೂಲ ವ್ಯಕ್ತಿಯಾಗಿ ಮಾತಾನಾಡಿದ ಶ್ರೀಮತಿ ಕ್ಯಾರೊಲ್ ಪಾಯಸ್ ಅವರು ಇಂಟರ್ ವ್ಯೂ ವೃತ್ತಿಪರ ಸಂಭಾಷಣೆ ಯನ್ನು ತಿಳಿಸಿ ಕೊಟ್ಟರು. ಇದೇ ದಿನ ಸಂಜೆ ಸ್ವರಕ್ಷಣಾ ಸಂಸ್ಥೆಯ ವತಿಯಿಂದ (ಸೆಲ್ಫ್ ಡಿಫೆನ್ಸ್) ಆತ್ಮ ರಕ್ಷಣೆಯ ಬಗ್ಗೆ ಅರಿವು ಮೂಡಿಸುವ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ನಡೆಯಿತು.

ಶ್ರೀ ಕಾರ್ತಿಕ್ ಎಸ್ ಕಟೀಲ್ ಹಾಗೂ ಇವರ ತಾಯಿ ಶ್ರೀಮತಿ ಶೋಭಲತಾ ಜೊತೆಗೂಡಿ ತಾವು ತಮ್ಮ ಆತ್ಮ ರಕ್ಷಣೆಯನ್ನು ಹೇಗೆ ಮಾಡಬೇಕು ಎಂದು ಪ್ರಾತ್ಯಕ್ಷಿಕೆಯೊಂದಿಗೆ ಮುಂಜಾಗ್ರತೆಯನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.


ಕಾರ್ತಿಕ್ ಕಟೀಲ್ ಇವರು ತಮ್ಮ ತಾಯಿಯೊಂದಿಗೆ ಜಂಟಿಯಾಗಿ 2 ಲಕ್ಷ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಆತ್ಮರಕ್ಷಣೆಯ ತರಬೇತಿಯನ್ನು ನೀಡಿದರು. ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಮತ್ತು ಜೀತ್ ಕುನೆ ಡೋ ಇದರಲ್ಲೂ ಪರಿಣಿತರಾದ ಇವರು ಎರಡೂ ವಿಧಾನದಲ್ಲಿ ತರಬೇತು ನೀಡುವ ಮಾರ್ಶಲ್ ಆರ್ಟ್ ತರಬೇತುದಾರರಾಗಿದ್ದಾರೆ. ಇವರ ತರಬೇತಿಯಿಂದ ಹಲವಾರು ಮಹಿಳೆಯರು, ವಿದ್ಯಾರ್ಥಿಗಳು ಅತ್ಯಾಚಾರ, ಕಿರುಕುಳ ಪ್ರಯತ್ನದಿಂದ ರಕ್ಷಣೆಯನ್ನು ಪಡೆದಿದ್ದಾರೆ.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿಎ ನಂದಗೋಪಾಲ ಶೆಣೈ, ಇವರು ಬ್ಲ್ಯಾಕ್ ಬೆಲ್ಟ್ ಶ್ರೀ ಕಾರ್ತಿಕ್ ಕಟೀಲ್ ಹಾಗೂ ಅವರ ತಾಯಿ ಶ್ರೀಮತಿ ಶೋಭಲತಾ ಇವರನ್ನು ಶಾಲು ಹೊದಿಸಿ ನೆನಪಿನ ಕಾಣಿಕೆಯನ್ನು ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷರಾದ ಶ್ರೀ ಡಿ. ರಮೇಶ ನಾಯಕ್ ಮೈರಾ, ಕಾರ್ಯದರ್ಶಿ ಡಾ ಕಸ್ತೂರಿ ಮೋಹನ ಪೈ, ಸುಚಿತ್ರಾ ರಮೇಶ್ ನಾಯಕ್, ಕಾರ್ಯನಿರ್ವಹಣಾಧಿಕಾರಿ ಡಾ. ಬಿ. ದೇವದಾಸ ಪೈ , ಶ್ರೀ ಪೂಣಾ೯ನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಮುರಳಿಧರ ಪ್ರಭು ವಗ್ಗ, ಕಾರ್ಯದರ್ಶಿ ರವೀಂದ್ರ ನಾಯಕ್ ಕುಂಟಲ್ಪಾಡಿ, ನಿಕಟಪೂರ್ವ ಅಧ್ಯಕ್ಷ ವಿಜಯ ಶೆಣೈ ಕೊಡಂಗೆ, ಶ್ರೀಮತಿ ಸುಜಾತಾ ರಮೇಶ್ ಸಾಮಂತ್, ಮೋಹನ್ ನಾಯಕ್ ಒಡ್ಡೂರು, ಗೋಪಾಲ್ ಸಾಮಂತ್ ಮೈರಾ, ರಂಜಿತಾ ಜಯರಾಂ, ಲಕ್ಷ್ಮೀ ಕಿಣಿ, ಮುಂತಾದವರು ಉಪಸ್ಥಿತರಿದ್ದರು.

ಶಿಬಿರದ ವಿದ್ಯಾರ್ಥಿಗಳು ಆತ್ಮ ರಕ್ಷಣೆಯ ಬಗ್ಗೆ ಪ್ರಯೋಜನ ಪಡೆದುಕೊಂಡರು. ಶಿಬಿರಾರ್ಥಿ ಅಶ್ವಿನಿ ವಂದಿಸಿ, ಡಾ. ವಿಜಯಲಕ್ಷ್ಮಿ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು.


