ಕೃಷಿ ಗದ್ದೆಗಳು ಕಣ್ಮರೆಯಾಗಿ ಸಾಂಪ್ರದಾಯಿಕ ವ್ಯವಸಾಯ ಮರೆಯಾಗಿದೆ – ಜನಾರ್ಧನ ಪೂಜಾರಿ

ಕಲ್ಲಡ್ಕ : ಮನುಷ್ಯನು ತಾಂತ್ರಿಕತೆಗೆ ತನ್ನನ್ನು ಬಳಸಿ ಕೊಂಡಾಗ ಹಿಂದಿನ ತಲೆಮಾರಿನ ನಂಬಿಕೆಯನ್ನು ಸಂಪ್ರದಾಯವನ್ನು ಮರೆಯುತ್ತಿದ್ದಾನೆ, ಇಂದು ಕೃಷಿ ಗದ್ದೆಗಳು ಕಣ್ಮರೆಯಾಗುತ್ತಿವೆ , ಸಾಂಪ್ರದಾಯಿಕ ವ್ಯವಸಾಯ ಮರೆಯಾಗುತ್ತಿದೆ ಇಂದಿನ ಮಕ್ಕಳಿಗೆ ಗದ್ದೆಯ ಹೆಸರಿನ ಔಷಧಿಯ ಗುಣಗಳು ತಿಳಿಯಬೇಕಾಗಿದೆ, ನಲಿಯುತ್ತಾ ಕಲಿಯುವುದು ಮತ್ತು ಮನೋರಂಜನೆಯನ್ನು ಪಡೆಯುವುದು ಕೆಸರು ಗದ್ದೆಯಲ್ಲಿ ನಡೆಯುವ ಕ್ರೀಡೆಗಳ ಮುಖ್ಯ ಅಂಗವಾಗಿದೆ ಎಂದು ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ ಹೇಳಿದರು.
ಅವರು ಓಂಕಾರ ಫ್ರೆಂಡ್ಸ್ ವೀರಕಂಭ ವತಿಯಿಂದ ದಿವಂಗತ ಬಾಬು ಪೂಜಾರಿಯವರ ಕುಮೇರು ಗದ್ದೆಯಲ್ಲಿ ನಡೆದ ” ಕೆಸರ್ದ ಕಂಡೋಡು ಕುಸಲ್ದ ಗೊಬ್ಬುಲು” ಎನ್ನುವ ನಾಲ್ಕನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಕ್ರೀಡಾಂಗಣ ಗದ್ದೆಗೆ ಹಾಲು ಎರೆದು ಪುಷ್ಪ ಸಮರ್ಪಿಸಿ ಮಾತನಾಡಿದರು.

ವೇದಿಕೆಯಲ್ಲಿ ಮಜಿ ವೀರಕಂಭ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೊರಗಪ್ಪ ನಾಯ್ಕ ಸಿಂಗೇರಿ, ಮಾಜಿ ಪಂಚಾಯತ್ ಸದಸ್ಯ ರಾಮಚಂದ್ರ ಪ್ರಭು, ಕ್ಯಾಂಪ್ಕೋ ಉದ್ಯೋಗಿ ವಾಸು ನಾಯ್ಕ, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿಗಳಿಗೆ ಪರಿಸರ ಸಂರಕ್ಷಣೆಯ ಸಲುವಾಗಿ ಹಣ್ಣಿನ ಗಿಡಗಳನ್ನು ನೀಡಿ ಗೌರವಿಸಲಾಯಿತು.

ಉದ್ಘಾಟನೆಯ ನಂತರ ಕೆಸರುಗದ್ದೆಯಲ್ಲಿ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಕ್ರೀಡೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕ್ರೀಡಾಕೂಟದ ನಿರ್ಣಾಯಕರಾಗಿ ಶಿಕ್ಷಕಿ ಸಂಗೀತ ಶರ್ಮಾ ಹಾಗೂ ಸತೀಶ್ ಅನಂತಾಡಿ ಸಹಕರಿಸಿದರು. ತುಳುನಾಡ ಶೈಲಿಯ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಕ್ರೀಡಾಕೂಟದಲ್ಲಿ ಮಜಿ ಶಾಲಾ ಮಕ್ಕಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರುಗಳು, ವೀರಕಂಬ ಗ್ರಾಮ ವ್ಯಾಪ್ತಿಯ ಸಂಘ ಸಂಸ್ಥೆಗಳ ಸದಸ್ಯರುಗಳು, ವೀರಕಂಭ ಗ್ರಾಮದ ಕ್ರೀಡಾಭಿಮಾನಿಗಳು ಭಾಗವಹಿಸಿ ಕ್ರೀಡಾಕೂಟವನ್ನು ಇನ್ನಷ್ಟು ಮೆರುಗುಗೊಳಿಸಿದರು.

ಮಜಿ ಶಾಲಾ ಮಕ್ಕಳು ಪ್ರಾರ್ಥಿಸಿ, ಸಂಗೀತ ಶರ್ಮ ಪಿ ಜಿ ಸ್ವಾಗತಿಸಿ, ಗೋಪಾಲ ಗುಂಡಿಮಜಲು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *