ಮಂಗಳೂರು: ಮನೆಗೆ ನುಗ್ಗಿದ ಕೋತಿ ಬಾಲಕಿಗೆ ಕಚ್ಚಿ ಗಾಯಗೊಳಿಸಿದ ಘಟನೆ ಮಂಗಳೂರಿನ ಗುರುಪುರದ ತೆಂಕ ಎಡಪದವು ಗ್ರಾಮದ ಕುಂದೋಡಿ ದೈವಸ್ಥಾನದ ಸಮೀಪದ ನಡೆದಿದ್ದು, ಕೋತಿಯನ್ನು ಜುಲೈ 13 ರಂದು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.

ಕಳೆದ ಮೂರ್ನಾಲ್ಕು ತಿಂಗಳಿನಿಂದ ಕೋತಿಯೊಂದು ಕುಂದೋಡಿ ಪರಿಸರದಲ್ಲಿ ಸಂಚರಿಸುತ್ತಿದ್ದಿತ್ತು. ಶನಿವಾರ ಮಧ್ಯಾಹ್ನ ಸುಮಾರು 3 ಗಂಟೆ ಸುಮಾರಿಗೆ ಅದು ಸ್ಥಳೀಯ ಮನೆಯೊಂದಕ್ಕೆ ನುಗ್ಗಿ, ನಿದ್ರಿಸುತ್ತಿದ್ದ ದೃತಿ ಎಂಬ ಬಾಲಕಿಗೆ ಕಚ್ಚಿ ಗಾಯಗೊಳಿಸಿ ಪರಾರಿಯಾಯಿತು.

ಸ್ಥಳೀಯರು ಹಾಗೂ ಎಡಪದವು ಗ್ರಾಮ ಪಂಚಾಯತ್ ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದರು.
ಪರಿಣಾಮವಾಗಿ ಅರಣ್ಯ ಇಲಾಖೆ ಸಿಬ್ಬಂದಿ ಗೂಡು ಮತ್ತು ಬಲೆಗಳನ್ನು ಬಳಸಿ ಕಾರ್ಯಾಚರಣೆ ನಡೆಸಿ ಜುಲೈ 13 ರ ಅಪರಾಹ್ನ ಕೋತಿಯನ್ನು ಬೋನಿಗೆ ಸೆರೆಹಿಡಿದರು.
ಗಾಯಗೊಂಡ ಬಾಲಕಿಗೆ ಚಿಕಿತ್ಸೆ ನೀಡಲಾಗಿದ್ದು, ಆಕೆ ಅಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದುಬಂದಿದೆ.




