ವೀರಕಂಭ ಮಜಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ – ರಕ್ಷಕ ಸಭೆ : “ಹೆತ್ತವರು ಮಗುವಿಗೆ ಮೌಲ್ಯಯುತ ಕಲಿಕೆ ನೀಡಿ” – ನ್ಯಾಯವಾದಿ ಶೈಲಜಾ ರಾಜೇಶ್

ಬಂಟ್ವಾಳ : ಜೀವನದಲ್ಲಿ ತಾಯಿಯ ಪಾತ್ರ ಬಹಳ ದೊಡ್ಡದು. ಮಗುವಿನ ನೋವು ನಲಿವಿನಲ್ಲಿ ಮಾತ್ರವಲ್ಲದೆ ಸಂಸ್ಕಾರಯುತ ಶಿಕ್ಷಣ ಹೊಂದುವಲ್ಲೂ ತಾಯಿ ಮಗುವಿನ ಪ್ರತಿ ಹಂತದಲ್ಲೂ ಜೊತೆಯಾಗಿರಬೇಕು, ಸಂಸ್ಕಾರಯುತ ಶಿಕ್ಷಣವು ಮನೆಯಿಂದಲೇ ಪ್ರಾರಂಭವಾಗುವಲ್ಲಿ ತಾಯಿಯೇ ಮೊದಲ ಗುರು ಆಗಿರುತ್ತಾಳೆ. ಮಗುವಿನ ನಡವಳಿಕೆಯನ್ನು ತಿದ್ದಿ ತೀಡಿ ಉತ್ತಮ ಶಿಕ್ಷಣ ನೀಡುವಲ್ಲಿ ತಾಯಿ ಮುಖ್ಯ ಪಾತ್ರಧಾರಿಯಾಗಿದ್ದಾಳೆ ಎಂದು ನ್ಯಾಯವಾದಿ ಶೈಲಜಾ ರಾಜೇಶ್‌ ಹೇಳಿದರು.

ಅವರು ಜು.10ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭ ಇಲ್ಲಿ ನಡೆದ ಶಿಕ್ಷಕ- ರಕ್ಷಕ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಸರಕಾರಿ ಶಾಲೆಗಳು ಸಮಾಜದ ಕನ್ನಡಿಯಾಗಿವೆ ಇಲ್ಲಿ ಪಠ್ಯ ವಿಷಯದ ಜೊತೆಗೆ ಜೀವನ ಶಿಕ್ಷಣವನ್ನು ಪಡೆಯಲು ಹೆಚ್ಚಿನ ಅವಕಾಶ ದೊರಕುತ್ತದೆ. ತಂತ್ರಜ್ಞಾನದ ಬಳಕೆಗೆ ಜೀವನದಲ್ಲಿ ಒಂದು ಚೌಕಟ್ಟನ್ನು ಹೊಂದಿರಬೇಕು ಅದೇ ಮುಖ್ಯವಾಗಿರಬಾರದು. ಮನುಷ್ಯನು ಎಷ್ಟೇ ಸಿರಿತನವನ್ನು ಹೊಂದಿದ್ದರು, ಸಂಸ್ಕಾರವನ್ನು ಬಿಡಬಾರದು ಗುಣದಿಂದ ಸಿರಿತನ ಹೊಂದಿರಬೇಕೇ ವಿನಹ ಸಿರಿತನದ ಅಹಂನಿಂದ ಬದುಕಬಾರದು.

ಇಂದು ವಿದ್ಯಾರ್ಥಿಗಳು ಯುವಕ-ಯುವತಿಯರು ತಂತ್ರಜ್ಞಾನದ ಬಳಕೆಯಿಂದ ಮೊಬೈಲ್ ಗಳ ದಾಸರಾಗುತ್ತಿದ್ದಾರೆ ಇದರಿಂದ ಕಾಪಾಡುವಲ್ಲಿ ಹೆತ್ತವರು ಮಗುವಿಗೆ ಮೌಲ್ಯಯುತ ಕಲಿಕೆಯನ್ನು ನೀಡಿ ಅವರ ಜೊತೆ ಸಮಯವನ್ನು ಕಳೆಯಬೇಕು. ಪೋಷಕರು ಮನೆಯಲ್ಲಿ ಮಗುವಿಗೆ ಬೇಕಾದ ಪ್ರೀತಿ ಸಂತೋಷಗಳನ್ನು ನೀಡಿದಾಗ ಅವರು ಅದನ್ನು ಹುಡುಕುವ ನೆಪದಲ್ಲಿ ತಮ್ಮ ಜೀವನವನ್ನು ಹಾಳು ಮಾಡುವುದಿಲ್ಲ ಎಂದು ಕಿವಿ ಮಾತು ಹೇಳಿದರು.

ಶ್ರೀ ಮಂತ್ರದೇವತಾ ಸಾನಿಧ್ಯ ಕಟ್ಟೆಮಾರು ಇಲ್ಲಿನ ಧರ್ಮದರ್ಶಿ ಮನೋಜ್ ಕುಮಾರ್ ಮಾತನಾಡಿ, ಶಾಲೆ ಎಂಬುದು ಧರ್ಮರಹಿತವಾದ ಒಂದು ಸಂಸ್ಥೆಯಾಗಿದೆ ಹಾಗೂ ಸಂಸ್ಕಾರಯುತ ಶಿಕ್ಷಣದಿಂದ ವಿದ್ಯಾರ್ಥಿಗಳು ಉತ್ತಮ ಪ್ರಜೆಯಾಗಿ ಮೂಡಿಬರಲು ಸಾಧ್ಯವಿದೆ. ವಿದ್ಯಾದಾನ ಎಲ್ಲಕ್ಕಿಂತಲೂ ಶ್ರೇಷ್ಠವಾದದ್ದು, ತಮ್ಮ ಸೇವಾ ಟ್ರಸ್ಟ್ ನಿಂದ ಹಲವು ಶಾಲೆಗಳಿಗೆ ಆರ್ಥಿಕವಾಗಿ ಮತ್ತು ಭೌತಿಕವಾಗಿ ಸಹಾಯ ಮಾಡುತ್ತಿದ್ದು ಮಜಿ ವೀರಕಂಭ ಸರಕಾರಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಸಹಕರಿಸಲು ತಮ್ಮ ಸಂಸ್ಥೆ ಸದಾ ಬೆಂಬಲವಾಗಿ ನಿಂತಿರುತ್ತದೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೊರಗಪ್ಪ ನಾಯ್ಕ್ ಸಿಂಗೇರಿ ವಹಿಸಿದ್ದರು. ವೇದಿಕೆಯಲ್ಲಿ ವೀರಕಂಬ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ ಗೋಳಿಮಾರ್ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಈಶ್ವರ ಭಟ್, ಶಾಲಾ ನಾಯಕಿ ಲಿಖಿತ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳು , ಮಕ್ಕಳ ಪೋಷಕರು, ಶಾಲಾ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಾಲಾ ಮಕ್ಕಳು ಪ್ರಾರ್ಥಿಸಿ ,ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಇಂದು ಶೇಖರ್ ವಂದಿಸಿದರು. ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *