ಪುತ್ತೂರು: ಪುತ್ತೂರಿನ ಬೊಳುವಾರು ನಿವಾಸಿ ವಿನೋದ್ ಕುಮಾರ್, ರಾಜೇಶ್ವರಿ ದಂಪತಿ ಪುತ್ರ, ಕೊಂಬೆಟ್ಟು ಪಿಯು ಕಾಲೇಜಿನ 2ನೇ ವರ್ಷದ ವಾಣಿಜ್ಯ ವಿದ್ಯಾರ್ಥಿ ಅರುಣ್ ಕುಮಾರ್ ರವರು ಹೊಸ ಮಾದರಿಯ ಬಯೋಮೆಟ್ರಿಕ್ ಕಂಡುಹಿಡಿದಿದ್ದಾರೆ.
ವಿದ್ಯಾರ್ಥಿಗಳ ಹಾಜರಾತಿ ದೃಢೀಕರಣಕ್ಕೆ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಕೆಲವು ಶಾಲೆ-ಕಾಲೇಜುಗಳು ಅಳವಡಿಸಿಕೊಂಡಿವೆ. ಮನೆಯಿಂದ ಹೊರಟ ವಿದ್ಯಾರ್ಥಿ ಶಾಲೆಗೆ ತಲುಪಿದ್ದಾನೆಯೇ? ಶಾಲೆಯಿಂದ ಹೊರಟಿದ್ದಾನೆಯೇ ಎನ್ನುವುದನ್ನು ಮನೆಯವರಿಗೂ ತಿಳಿಸುವ ಹೊಸ ಪರಿಕರವೊಂದನ್ನು ಸಂಶೋಧಿಸಿ ಶಾಲೆಯಲ್ಲಿ ಅಳವಡಿಸಿದ್ದಾನೆ.
ಈ ಸಿಸ್ಟಮ್ನಲ್ಲಿ ಮುಖ, ಬೆರಳಚ್ಚು ಎರಡೂ ದಾಖಲಾಗುತ್ತದೆ. ಬೆಳಗ್ಗೆ 9ರಿಂದ 10 ಗಂಟೆಯ ಒಳಗೆ ವಿದ್ಯಾರ್ಥಿ ಶಾಲೆಗೆ ಬರಬೇಕು ಎನ್ನುವ ಸಮಯ ನಿಗದಿ ಮಾಡಲಾಗಿದೆ.
ಈ ಅವಧಿಯಲ್ಲಿ ಬರುವ ವಿದ್ಯಾರ್ಥಿಗಳು ಬಯೋಮೆಟ್ರಿಕ್ ಮುಂದೆ ನಿಂತರೆ ಹಾಜರಾತಿ ದಾಖಲಾಗುತ್ತದೆ ಮತ್ತು ವಿದ್ಯಾರ್ಥಿ ಶಾಲೆಗೆ ಬಂದಿದ್ದಾನೆ ಎನ್ನುವ ಸಂದೇಶ ವಾಟ್ಸ್ ಆ್ಯಪ್, ಟೆಲಿಗ್ರಾಮ್ ಮೂಲಕ ಹೆತ್ತವರಿಗೆ ರವಾನೆ ಆಗುತ್ತದೆ.
ಸಂಜೆ 3.30 ರಿಂದ 4.30ರ ಒಳಗೆ ಹೊರಟರೆ ಆ ಸಂದೇಶವೂ ಸಹ ಇದರಲ್ಲಿ ರವಾನೆಯಾಗುತ್ತದೆ. ಜಿಲ್ಲೆಯ ಮಟ್ಟಿಗೆ ಇದು ಮೊದಲ ಪ್ರಯೋಗ ಎನಿಸಿದೆ.