ಮಂಗಳೂರು: ನೀರುಮಾರ್ಗದ ಕೆಲರಾಯಿ ಚರ್ಚ್ ಬಳಿಯ ನಿವಾಸಿ ಹೈನುಗಾರರಾಗಿರುವ ಜೋಸೆಫ್ ಸ್ಟಾ ನಿ ಪ್ರಕಾಶ್ ಎಂಬವರಿಗೆ ಸೇರಿದ 7 ದನಗಳು 10 ದಿನದ ಅಂತರದಲ್ಲಿ ಅನುಮಾನಾಸ್ಪದವಾಗಿ ಸಾವನಪ್ಪಿದ ಘಟನೆ ನಡೆದಿದೆ.

ಮೇಯಲು ಹೋದ ದನಗಳಿಗೆ ಯಾರೋ ವಿಷ ಪದಾರ್ಥ ನೀಡಿ ಸಾಯಿಸಿರುವ ಬಗ್ಗೆ ಅನುಮಾನವಿದೆ ಎಂದು ಮನೆಯ ಮಾಲೀಕ ತಿಳಿಸಿದ್ದಾರೆ. ಸುಮಾರು 50 ವರ್ಷದಿಂದ ಹೈನುಗಾರಿಕೆ ನಡೆಸುತ್ತಿದ್ದು, 30ಕ್ಕೂ ಅಧಿಕ ಜಾನುವಾರುಗಳಿವೆ ಕರು ಇರುವ ಹಾಲು ಕರೆಯುವ, ತನೆಯ ಹಸುಗಳು, ದೊಡ್ಡ ಮತ್ತು ಮಧ್ಯಮ ಗಾತ್ರದ ಎತ್ತುಗಳುಯಿವೆ.

ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೋಸೆಫ್ ಸ್ಟಾ ನಿ ಪ್ರಕಾಶ್, ನಿತ್ಯ ನೀರುಮಾರ್ಗ- ಕೆಲರಾಯಿ ಕಡೆಗೆ ದನಗಳನ್ನು ಮೇಯಲು ಬಿಡುತ್ತೇವೆ. ಇದೇ ಮೊದಲ ಬಾರಿಗೆ ಈ ರೀತಿಯ ಘಟನೆ ನಡೆದಿದೆ ಮನೆಗೆ ಬಂದ ಬಳಿಕ ಒಂದೊಂದೇ ದನಗಳಿಗೆ ನಿತ್ರಾಣಗೊಂಡು, ಬಿದ್ದು ಸಾವನ್ನಪ್ಪಿವೆ. ಕುತ್ತಿಗೆ ಬಳಿ ದಪ್ಪವಾಗಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

ಜೂ.12ರಂದು ಒಂದು ದನ ಸಾವನ್ನಪ್ಪಿದೆ. 13ರಂದು ಪಶು ವೈದ್ಯರು ಬಂದು ರಕ್ತದ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ. ಆರು ದನಗಳು ಮನೆಯಲ್ಲಿಯೇ ಸಾವನ್ನಪ್ಪಿದ್ದು, ಒಂದು ದನ ಮೇಯಲು ಬಿಟ್ಟಲ್ಲಿ ಗುಡ್ಡದಲ್ಲಿಯೇ ಮೃತಪಟ್ಟಿದೆ. ಇನ್ನು ಒಂದು ಜೀವನ್ಮರಣ ಸ್ಥಿತಿಯಲ್ಲಿದೆ. ಸ್ಥಳಿಯರು ದನಗಳನ್ನು ಮೇಯಲು ಬಿಡುತ್ತಿದ್ದಾರೆ. ಆದರೆ ಅವರಿಗೆ ಆ ದನಗಳಿಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದರು.
ಘಟನೆಯ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

