ಮಂಗಳೂರು: ತಾಲೂಕಿನ ಪಂಪ್ವೆಲ್ ಸಮೀಪದ ಪಾನ್ ಗೂಡಂಗಡಿಯ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ಗಾಂಜಾ ಸುವಾಸನೆಯುಳ್ಳ ಚಾಕಲೇಟ್ಗಳನ್ನು ಮಾರಾಟ ಮಾಡುತ್ತಿರುವ ಆರೋಪದ ಮೇಲೆ ದಾಳಿ ನಡೆಸಿ ಉತ್ತರ ಪ್ರದೇಶ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಉತ್ತರ ಪ್ರದೇಶ ಮೂಲದ ಸುಜಿತ್ ಕುಮಾರ್ ಎಂದು ಗುರುತಿಸಲಾಗಿದೆ.

ಗಾಂಜಾ ಎಲೆಗಳ ಸುವಾಸನೆಯುಳ್ಳ ಚಾಕ್ಲೇಟ್ಗಳನ್ನು ಮಾರಾಟ ಮಾಡುತ್ತಿದ್ದ ಎಂಬ ಆರೋಪದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಪಾನ್ ಗೂಡಂಗಡಿಯ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿ ಗಾಂಜಾ ಎಲೆಗಳ ಸುವಾಸನೆಯುಳ್ಳ ಚಾಕೊಲೇಟ್ಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ ಎಂದು ತಿಳಿದುಬಂದಿದೆ.
ದಾಳಿ ವೇಳೆ ಆರೋಪಿ ಸುಜಿತ್ನಿಂದ ಬಮ್ಚಾರ್ ಮಿನಾರ್ ಹೆಸರಿನ 303 ಗ್ರಾಂ ತೂಕದ ಮಾದಕ ದ್ರವ್ಯದ ಸುವಾಸನೆಯುಳ್ಳ ಚಾಕಲೇಟ್ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಕಾರ್ಯಾಚರಣೆಯಲ್ಲಿ ಅಬಕಾರಿ ಇಲಾಖೆ ಮಂಗಳೂರು ಉತ್ತರ ವಿಭಾಗದ ಉಪ ಅಧೀಕ್ಷಕ ಗಾಯತ್ರಿ ಸಿ.ಎಚ್. ನೇತೃತ್ವದಲ್ಲಿ ಮಂಗಳೂರು ಉತ್ತರ ಉಪವಿಭಾಗ ಉಪನಿರೀಕ್ಷಕ ಸುಧೀರ್ ಕುಮಾರ್ ಪ್ರಕರಣ ದಾಖಲಿಸಿದ್ದಾರೆ.
ನಿರೀಕ್ಷಕಿ ಸುನೀತಾ, ಉಪನಿರೀಕ್ಷಕ ಹರೀಶ್, ಸಿಬ್ಬಂದಿ ಸಂಧ್ಯಾ ಹಾಗೂ ಚಾಲಕ ಹರೀಶ, ಕಾನ್ಸ್ಟೆಬಲ್ ಮಾರುತಿ ಡಿ.ಜೆ. ಅವರು ಭಾಗವಹಿಸಿದ್ದರು.
