79ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ, ರಿಲಯನ್ಸ್ ಅಸೋಸಿಯೇಶನ್ (ರಿ) ಬೊಳ್ಳೂರು ವತಿಯಿಂದ ಬೃಹತ್ ರಕ್ತದಾನ ಶಿಬಿರ

ಹಳೆಯಂಗಡಿ: ರಿಲಯನ್ಸ್ ಅಸೋಸಿಯೇಶನ್ (ರಿ) ಬೊಳ್ಳೂರು ಹಳೆಯಂಗಡಿ ಇದರ ವತಿಯಿಂದ, ಮುಹಿಯುದ್ದೀನ್ ಜುಮ್ಮಾ ಮಸೀದಿ ಬೊಳ್ಳೂರು ಇದರ ಆಶ್ರಯದಲ್ಲಿ, ಕೆ.ಎಂ.ಸಿ ಅಸ್ಪತ್ರೆ ಮಂಗಳೂರು ಇವರ ಜಂಟಿ ಸಹಭಾಗಿತ್ವದಲ್ಲಿ, ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಹಳೆಯಂಗಡಿ ಹಾಗೂ ಫ್ರೆಂಡ್ಸ್ ಕ್ರಿಕೆಟರ್ಸ್ ಇಂದಿರಾನಗರ ಇವರ ಸಹಯೋಗದೊಂದಿಗೆ “ಬೃಹತ್ ರಕ್ತದಾನ ಶಿಬಿರವು’ ಬೊಳ್ಳೂರಿನ ಮುಹಿಯದ್ದೀನ್ ಜುಮ್ಮಾ ಮಸೀದಿ ವಠಾರದಲ್ಲಿ ಆ.15ರಂದು ನಡೆಯಿತು.

ಬೊಳ್ಳೂರು ಮಸೀದಿಯ ಖತೀಬರಾದ ಮೊಹಮ್ಮದ್ ಶರೀಫ್ ಅರ್ಷಾದಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಒಂದು ಜೀವ ಉಳಿಸುವ ನೆಲೆಯಲ್ಲಿ ದಾನಗಳಲ್ಲಿ ರಕ್ತದಾನ ಬಹಳ ಪ್ರಮುಖವಾಗಿದ್ದು, ಆರೋಗ್ಯವಂತ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು, ಇಂತಹ ಮಹತ್ವಪೂರ್ಣ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಸ್ಥಳೀಯ ಸಂಘ ಸಂಸ್ಥೆಗಳ ಕ್ರಿಯಾಶೀಲತೆ ಅತ್ಯಂತ ಶ್ರೇಷ್ಠ ಮತ್ತು ಸಮಾಜಕ್ಕೆ ಮಾದರಿಯಾದ ಒಂದು ಚಿಂತನೆ” ಎಂದರು.

ಮಾನವ ರಕ್ತದಾನ ಮಾಡುವುದರಿಂದ ಹೃದಯಾಘಾತ, ಮದುಮೇಹ ನಂತಹ ಅನೇಕ ಖಾಯಿಲೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಹಾಗೂ ಹಳೆ ರಕ್ತ ದೇಹದಿಂದ ಹೋಗಿ ಕೆಲವೇ ದಿನಗಳಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ ಎಂದು ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇದರ ವೈದ್ಯರಾದ ಡಾಕ್ಟರ್ ವಸಂತ್ ಅವರು ರಕ್ತದಾನದ ಮಹತ್ವದ ಕುರಿತು ಮಾಹಿತಿ ನೀಡಿದರು.

ವೇದಿಕೆಯಲ್ಲಿ ರಿಲಯನ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಆರಿಶ್ ನವರಂಗ್, ಮುಹಿಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಬಿ.ಎಂ ಮೊಹಮ್ಮೆದ್, ಹಳೆಯಂಗಡಿ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷರಾದ ನಾಗೇಶ್ ಬಂಗೇರ, ಫ್ರೆಂಡ್ಸ್ ಕ್ರಿಕೆಟರ್ಸ್ ಇಂದಿರಾನಗರ ಅಧ್ಯಕ್ಷರಾದ ಹಸೈನಾರ್, ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಅಝೀಜ್ ಐ.ಎ.ಕೆ ಹಾಗು ಅಕ್ಬರ್ ಬೊಳ್ಳೂರು ಉಪಸ್ಥಿತರಿದ್ದರು.

ಜಾತಿ ಧರ್ಮ ಲಿಂಗ ಭೇದವಿಲ್ಲದೆ ಪರಿಸರದ ಎಲ್ಲರೂ ಸೇರಿ ರಕ್ತದಾನ ಮಾಡುವ ಮೂಲಕ ಶಿಬಿರದಲ್ಲಿ ಒಟ್ಟು 75 ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವುದರೊಂದಿಗೆ ಜೀವದಾನಿಗಳಾದರು.

ಇಕ್ಬಾಲ್ ಎಂ.ಎ. ಕಾರ್ಯಕ್ರಮ ನಿರೂಪಿಸಿ, ಅಬ್ದುಲ್ ಮುಬಾರಕ್ ವಂದಿಸಿದರು.

Leave a Reply

Your email address will not be published. Required fields are marked *