ಮಂಗಳೂರು: ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಸನಾತನ ಯಕ್ಷಾಲಯ(ರಿ.) ಸಂಸ್ಥೆಯ ತನ್ನ ಹದಿನಾರನೇ ವಾರ್ಷಿಕೋತ್ಸವವನ್ನು ಮಂಗಳೂರಿನ ಪುರಭವನದಲ್ಲಿ ಜೂನ್ 22ನೇ ತಾರೀಕು ಆದಿತ್ಯವಾರದಂದು ಆಚರಿಸಲಿದೆ ಎಂದು ಸಂಸ್ಥೆಯ ಜಯಪ್ರಕಾಶ್ ಹೆಬ್ಬಾರ್ ತಿಳಿಸಿದ್ದಾರೆ.
ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಅಂಗವಾಗಿ ಅಪರಾಹ್ನ 2.30 ರಿಂದ 3.30ರ ತನಕ ಸಂಸ್ಥೆಯ ವಿದ್ಯಾರ್ಥಿಗಳಿಗೆ ಮುಖವರ್ಣಿಕೆ ಸ್ಪರ್ಧೆಯನ್ನು ಆಯೋಜಿಸಿವೆ.
ಸಂಜೆ 4.00 ರಿಂದ 5.30ರ ತನಕ ಕವಿ ಮುದ್ದಣ ವಿರಚಿತ “ರತ್ನಾವತಿ ಕಲ್ಯಾಣ” ಮತ್ತು ಸಂಜೆ 7.00ರಿಂದ 9.00ರ ತನಕ “ಕುಮಾರ ವಿಜಯ” ಪ್ರಸಂಗವನ್ನು ಪ್ರದರ್ಶಿಸಲಿದೆ.

ಸಂಜೆ 5.30ರಿಂದ 7.00 ತನಕ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷಗಾನ ಕಲಾರಂಗ ಉಡುಪಿ ಇದರ ಕಾರ್ಯದರ್ಶಿಗಳಾದ ಮುರಳಿ ಕಡೇಕಾರ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಾಮಂಜೂರು ಅಮೃತೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಸ್ಥಾಪಕರಾದ ಸೀತಾರಾಮ ಜಾಲು ಶೆಟ್ಟಿ, ಸಾವಂತೆ ನಾಗಜ ಕ್ಷೇತ್ರ, ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶಶೀಂದ್ರ ಕುಮಾರ್, ಮುಂಬಯಿಯ ಶ್ರೀ ಗಾಂಬ್ರೇವಿ ಶ್ರೀ ಆದಿನಾಥೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದ ಜ್ಯೋತಿಷಿಗಳಾದ ಪೆರ್ಣಂಕಿಲ ಹರಿದಾಸ ಭಟ್, ಕೊಪ್ಪಲಕಾಡು ಶ್ರೀದೇವಿ ಕನ್ನಕ್ಷನ್ ಕೊಂಚಾಡಿಯ ಮಾಲಕರಾದ ಶ್ರೀ ವೆಂಕಟೇಶ್ ಯೆಯ್ಯಾಡಿ, ಮೊಂಡೆಲೇಸ್ಟ್ ಇಂಟರ್ ನ್ಯಾಷನಲ್ನ ಸೀನಿಯರ್ ಮ್ಯಾನೇಜರ್ ಸಂತೋಷ್ ಕುಮಾರ್ ಎಸ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ರಾಕೇಶ್ ರೈ ಅಡ್ವ ಮಂಗಳೂರಿನ ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ಪದವಿಯನ್ನು ಪಡೆದು, ಮುಂಬೈ ಮತ್ತು ಮಂಗಳೂರಿನಲ್ಲಿ ಉತ್ತಮ ಉದ್ಯೋಗದಲ್ಲಿದ್ದರೂ ಯಕ್ಷಗಾನ ಕಲೆಯ ಸೆಳೆತಕ್ಕೊಳಗಾಗಿ 16 ವರ್ಷಗಳ ಹಿಂದೆ ಅತ್ತಾವರದ ಪಾರ್ವತಿ ಕುಟೀರದಲ್ಲಿ ‘ಸನಾತನ ಯಕ್ಷಾಲಯ’ ಸಂಸ್ಥೆಯನ್ನು ಸ್ಥಾಪಿಸಿದರು. ಅಲ್ಲಿ ವಿದ್ಯಾರ್ಥಿಗಳಿಗೆ ಯಕ್ಷಗಾನ ನಾಟ್ಯಾಭ್ಯಾಸವನ್ನು ಪ್ರಾರಂಭಿಸಿದರು. ಅದೆಷ್ಟೋ ಕಡೆ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ, ನಾಟ್ಯ, ವೇಷಭೂಷಣ, ಅರ್ಥಗಾರಿಕೆ, ಮುಖವರ್ಣಿಕೆಯ ತರಗತಿಗಳನ್ನು ನಡೆಸುತ್ತಾ ಬಂದಿದ್ದಾರೆ ಎಂದರು.
ಪ್ರಸ್ತುತ ರಾಕೇಶ್ ರೈ ದಕ್ಷಿಣಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ 16 ಕಡೆ ತರಬೇತಿಯನ್ನು ನಡೆಸುತ್ತಿರುವುದಲ್ಲದೆ 700ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ನಾಟ್ಯ, ಬಣ್ಣಗಾರಿಕೆ ಮತ್ತು
ಪ್ರಸಾದನಗಳಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಯಕ್ಷಗಾನ ನಾಟ್ಯಾಭ್ಯಾಸವನ್ನು ಮಾಡುತ್ತಿರುವುದು ಸಂತೋಷದ ವಿಷಯ.

ಈ ಸಂದರ್ಭ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ, ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಿಕೊಂಡು ಬರಲಾಗುತ್ತಿದೆ. ತನ್ನ ಹದಿನೈದನೇ ವಾರ್ಷಿಕೋತ್ಸವವನ್ನು ‘ಜೋಡಾಟ’ದ ಮೂಲಕ ಸುಮಾರು 140 ಶಿಷ್ಯರನ್ನೊಳಗೊಂಡು ಮಂಗಳೂರಿನ ಪುರಭವನದಲ್ಲಿ “ಶ್ರೀದೇವಿ ಮಹಾತ್ಮೆ” ಎಂಬ ಪ್ರಸಂಗವನ್ನು ಪ್ರದರ್ಶಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಕೇಶ್ ರೈ ಅಡ್ಕ, ನಾರಾಯಣ ಶೆಟ್ಟಿ, ಸುಕನ್ಯಾ ಶೇಖರ್, ಸ್ನೇಹ ಆಚಾರ್ಯ, ಲೀಲಾಧರ ಶೆಟ್ಟಿ ಕಟ್ಲ ಮತ್ತಿತರರು ಉಪಸ್ಥಿತರಿದ್ದರು.


