ಬಂಟ್ವಾಳ : ತಾಲೂಕಿನ ಕೊಡ್ಮಣ್ – ಪುದು ಗ್ರಾಮದ ಕಾಪಿಕಾಡ್ ಎಂಬಲ್ಲಿ ನವಜ್ಯೋತಿ ಸೇವಾ ಸಂಘ ಹಾಗೂ ವಿಷನ್ ಸ್ಪ್ರಿಂಗ್ ಫೌಂಡೇಶನ್ ನೋಯ್ಡಾ, ಇದರ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಹಾಗೂ ಕನ್ನಡಕ ವಿತರಣಾ ಕಾರ್ಯಕ್ರಮವು ಜೂ15ರಂದು ಭಾನುವಾರ ಕಾಪಿಕಾಡ್ ನಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಫರಂಗಿಪೇಟೆ ಶ್ರೀ ರಾಮ ಶಾಲೆಯ ನಿವೃತ್ತ ಮುಖ್ಯಪಾಧ್ಯಾಯರಾದ ಕೆ ಆರ್ ದೇವದಾಸ್ ಮಾತನಾಡಿ, ಸಾಮಾಜಿಕ, ಧಾರ್ಮಿಕ, ಕಲಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ನವಜ್ಯೋತಿ ಸಂಘವು ಇಂದು ಸಮಾಜದಲ್ಲಿ ಅರೋಗ್ಯ ಸೇವೆಯಾಗಿ ಉಚಿತ ಕಣ್ಣಿನ ತಪಾಸಣೆ ಹಾಗೂ ಕನ್ನಡಕ ವಿತರಣೆ ಶಿಬಿರದ ಮೂಲಕ ಸಮಾಜಕ್ಕೆ ಹೊಸ ಬೆಳಕನ್ನು ನೀಡುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ, ಸಮಾಜಮುಖಿ ಕಾರ್ಯಗಳು ನಿರಂತರ ನಡೆಯಲಿ ಎಂದು ಶುಭ ಹಾರೈಸಿದರು.
ಅತಿಥಿಗಳಾಗಿ ಮೇರಮಜಲು ಗ್ರಾ. ಪಂ ಅಧ್ಯಕ್ಷರಾದ ಸತೀಶ್ ನಾಯ್ಗ, ವಿಷನ್ ಸ್ಪ್ರಿಂಗ್ ಫೌಂಡೇಶನ್ ನೋಯ್ಡಾ ಇದರ ಔಟ್ ರೀಚ್ ಇನ್ಚಾರ್ಜ್ ಜೈಪಾಲ್ ಆಚಾರ್ಯ, ಪುದು ಗ್ರಾ ಪಂ ಸದಸ್ಯರಾದ ಸುಬ್ರಹ್ಮಣ್ಯ ರಾವ್, ಆಶಾ ಕಾರ್ಯಕರ್ತೆ ಮಾಧವಿ ಸಂದೀಪ್ ಶೆಟ್ಟಿ ಕೊಡ್ಮಾಣ್, ನವಜ್ಯೋತಿ ಸೇವಾ ಸಂಘದ ಅಧ್ಯಕ್ಷ ಗಿರೀಶ್ ಶೆಟ್ಟಿ ಕಾಪಿಕಾಡ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರಾಜ್ ಕುಲಾಲ್ ಸ್ವಾಗತಿಸಿ, ಯತೀಶ್ ಪೂಜಾರಿ ಧನ್ಯವಾದವಿತ್ತು, ಶಿವರಾಜ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.
ಸುಮಾರು 123 ಜನ ಶಿಬಿರದ ಪ್ರಯೋಜನ ಪಡೆದುಕೊಂಡರು, 81 ಮಂದಿಗೆ ಉಚಿತ ಕನ್ನಡಕ ವಿತರಿಸಲಾಯಿತು.




