ಮಂಗಳೂರು : ತೆಂಕುತಿಟ್ಟು ಚಿಕ್ಕ ಮೇಳಗಳ ತಿರುಗಾಟಕ್ಕೆ ಅಧಿಕೃತವಾಗಿ ಚಾಲನೆ ಸಿಗಲಿದ್ದು, ಜೂನ್ 5 ರಂದು ತಲಕಳ ಕಾಶೀ ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಯಕ್ಷ ಪ್ರದರ್ಶನ ಮಾಡಿ ಗೆಜ್ಜೆ ಮುಹೂರ್ತದೊಂದಿಗೆ ತಿರುಗಾಟವನ್ನು ಆರಂಭಿಸಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,“ಚಿಕ್ಕ ಮೇಳಗಳ ಒಕ್ಕೂಟ” ಸಂಸ್ಥೆ ಕಳೆದೆರಡು ವರುಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದೆ. ಸುಮಾರು 50ಕ್ಕೂ ಮೇಲ್ಪಟ್ಟು ಚಿಕ್ಕಮೇಳಗಳ ತಂಡವನ್ನು ಒಂದೇ ವ್ಯವಸ್ಥೆಯಡಿ ತಂದು ಶಿಸ್ತು ಸಂಪ್ರದಾಯಕ್ಕೆ, ಸಭ್ಯತೆಗೆ ಆಡಚಣೆಯಾಗದಂತೆ ನೀತಿ ನಿಯಮಾವಳಿ ರೂಪಿಸಿಕೊಂಡಿದೆ. ಮಳೆಗಾಲದಲ್ಲಿ 5 ಯಕ್ಷಗಾನ ಕಲಾವಿದರ ತಂಡ ಮನೆ ಮನೆಗೆ ತೆರಳಿ ಯಕ್ಷಗಾನ ಪ್ರದರ್ಶನ ಮಾಡಿ ಅವರು ನೀಡುವ ದೇಣಿಗೆಯನ್ನು ಸ್ವೀಕರಿಸುತ್ತದೆ ಎಂದರು.

ಜಿಲ್ಲೆಯಲ್ಲಿ ನೋಂದಾವಣಿ ಮಾಡಿಕೊಳ್ಳದ ತಂಡದ ವಿರುದ್ಧ ಕ್ರಮವಹಿಸುವಂತೆ ಆಗ್ರಹಿಸಿದ ಅವರು ಕಲಾ ತಂಡದಲ್ಲಿರುವ ಕಲಾವಿದರಿಗೆ ಕಾನೂನಿನಡಿಯಲ್ಲಿ ರಕ್ಷಣೆ ನೀಡಬೇಕು. ಅಲ್ಲದೆ ನಮ್ಮೊಂದಿಗೆ ನೋಂದಾಯಿಸದೆ ಅಶಿಸ್ತು, ಅಸಭ್ಯತೆಯ ಮೂಲಕ ನೋಂದಾಯಿತ ನಮ್ಮಿ ಚಿಕ್ಕಮೇಳದ ಒಕ್ಕೂಟದ ವ್ಯವಸ್ಥೆಗೆ ಭಂಗ ತರುವ ಅನಧಿಕೃತ “ಚಿಕ್ಕ ಮೇಳ”ದ ಹೆಸರಿನಲ್ಲಿ ತಿರುಗಾಟ ಮಾಡಿದರೆ ಅವರ ಮೇಲೆ ಶಿಸ್ತು ಕ್ರಮ ಕೈಗೊಂಡು ನೈಜ ಕಲಾವಿದರ ಬದುಕಿಗೆ ಸಹಕರಿಸಬೇಕು ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ತೆಂಕುತಿಟ್ಟು ಚಿಕ್ಕ ಮೇಳಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕುಮಾರ್ ಮಾಲೆಮಾರ್, ಜತೆ ಕಾರ್ಯದರ್ಶಿ ಕಡಬ ದಿನೇಶ ರೈ, ಉಪಾಧ್ಯಕ್ಷ ರಮೇಶ್ ಕುಲಶೇಖರ, ದಿವಾಕರ ದಾಸ್, ಮೋಹನ ಕಲಂಬಾಡಿ ಹಾಗೂ ಸಂತೋಷ್ ಸುದರ್ಶನ್ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.


