ಪುತ್ತೂರು: ಬಕ್ರಿದ್ ಹಾಗೂ ಇತರ ಹಬ್ಬಗಳ ಸಂದರ್ಭ ಜಾನುವಾರು ಹಾಗೂ ಇತರೆ ಪ್ರಾಣಿಗಳ ಹತ್ಯೆ ನಿಷೇಧವಿದ್ದು, ಕುರ್ಬಾನಿ ಆಗದಂತೆ ಮತ್ತು ಹಿಂಸಾತ್ಮಕವಾಗಿ ಗೋವುಗಳ ಸಾಗಾಟ ಮಾಡುವುದನ್ನು ಪೊಲೀಸ್ ಇಲಾಖೆ ತಡೆಯಲು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.
ಪುತ್ತೂರಿನ ಪ್ರೆಸ್ ಕ್ಲಬ್ ನಲ್ಲಿ ಈ ಕುರಿತು ಮಾಹಿತಿ ಮುಖಂಡರುಗಳು ಜಿಲ್ಲೆಯಲ್ಲಿ ಎರಡು ದಿನಗಳಿಂದ ಪೊಲೀಸರು ರಾತ್ರಿ 10 ರಿಂದ 2 ಗಂಟೆಯವರೆಗೆ ಮನೆಗಳಿಗೆ ಹೋಗಿ ಕಿರುಕುಳ ನೀಡಲಾಗುತ್ತಿದೆ. ಕಾರ್ಯಕರ್ತರ ಮನೆಗಳಿಗೆ ತೆರಳುವ ಪೊಲೀಸರು, ಜಿಪಿಎಸ್ ಚಿತ್ರ ಹಾಗೂ ಸೆಲ್ಫಿ ತೆಗೆದು ಗಾಬರಿ ಪಡಿಸುವ ಕಾರ್ಯ ಮಾಡುತ್ತಿದ್ದಾರೆ.

ಇದು ಮನೆಯಲ್ಲಿರುವ ಅನಾರೋಗ್ಯ ಪೀಡಿತರಿಗೆ ಹಾಗೂ ಪ್ರಾಯಸ್ತರಿಗೆ ತೊಂದರೆ ನೀಡುವ ಉದ್ದೇಶವಾಗಿದ್ದು, ಮುಂದೆ ಇದರಿಂದ ಸಮಸ್ಯೆಗಳಾದರೆ ಇಲಾಖೆಯೇ ಇದಕ್ಕೆ ಹೊಣೆಯಾಗಿರುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ರಾತ್ರಿ ಸಮಯ ಮನೆಗಳಿಗೆ ತೆರಳಲು ಕಾನೂನಿನಡಿ ಅವಕಾಶವಿಲ್ಲ. ಹಾಗೊಂದು ವೇಳೆ ಸಂದೇಹಗಳಿದ್ದರೆ ನೋಟಿಸ್ ನೀಡಿ ಕರೆಯಲಿ. ಈಗ ನಡೆಸುತ್ತಿರುವ ವಿಚಾರದ ಬಗ್ಗೆ ಹೈಕೋರ್ಟಿನಲ್ಲಿ ಪಿ.ಐ.ಎಲ್. ಹಾಕಿ ಪ್ರಶ್ನಿಸಲಾಗುವುದು ಎಂದು ಎಚ್ಚರಿಸಿದರು.

ವಿಹಿಂಪ ಜಿಲ್ಲಾಧ್ಯಕ್ಷ ಫಿಸಿಯೋಥೆರಪಿಸ್ಟ್ ಕೃಷ್ಣಪ್ರಸನ್ನ, ಕಾರ್ಯದರ್ಶಿ ನವೀನ್ ನೆರಿಯ, ಕೋಶಾಧಿಕಾರಿ ಮಾಧವ ಪೂಜಾರಿ, ಸಹಕಾರ್ಯದರ್ಶಿ ಶ್ರೀಧರ್ ತೆಂಕಿಲ, ಬಜರಂಗದಳ ಸಹಸಂಯೋಜಕ್ ಸಂತೋಷ್ ಉಪ್ಪಿನಂಗಡಿ ಉಪಸ್ಥಿತರಿದ್ದರು.


