ಬಂಟ್ವಾಳ: ಬಂಟ್ವಾಳ ತಾಲೂಕಿನ ನಾವೂರು ಅಗ್ರಹಾರ ಬೀದಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡಿದ್ದು, ನವೀಕರಣ ಬ್ರಹ್ಮಕಲಶೋತ್ಸವ ಹಾಗೂ ನೂತನ ಬ್ರಹ್ಮ ರಥ ಸಮರ್ಪಣೆ ಕಾರ್ಯಕ್ರಮ ಮೇ 28ರಿಂದ ಮೇ 30 ರವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ.ಸುದರ್ಶನ ಬಲ್ಲಾಳ್ ಮತ್ತು ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ರಾಕೇಶ್ ಮಲ್ಲಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.



ಮೇ 28ರಂದು ಬೆಳಗ್ಗೆ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಮತ್ತಿತರ ಕಾರ್ಯಕ್ರಮ ನಡೆಯಲಿದೆ. ಬಳಿಕ ಭಜನೆ, ಸಂಜೆ ವಾಸ್ತು ಪೂಜೆ ಇತ್ಯಾದಿ ಹಾಗೂ ಭಕ್ತಿ ಗಾನ ಸುಧಾ, ಭರತನಾಟ್ಯ, ರಾತ್ರಿ ಧಾರ್ಮಿಕ ಸಭೆ ನಡೆಯಲಿದ್ದು, ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸುವರು. ರಾತ್ರಿ ಯಕ್ಷ ತೆಲಿಕೆ ಪ್ರದರ್ಶನ ನಡೆಯಲಿದೆ.



ಮೇ 29ರಂದು ಬೆಳಗ್ಗೆ ಶ್ರೀ ಆಂಜನೇಯ ಹಾಗೂ ಸೋಮನಾಥ ದೇವರ ಪ್ರತಿಷ್ಠೆ,
ಭಜನೆ, ಸಂಜೆ ಯಕ್ಷಗಾನ ತಾಳಮದ್ದಳೆ, ನೃತ್ಯ ಸಂಧ್ಯಾ(ಮೋಹಿನಿಯಾಟ್ಟಂ), ರಾತ್ರಿ ಧಾರ್ಮಿಕ ಸಭೆ ನಡೆಯಲಿದ್ದು, ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅಧ್ಯಕ್ಷತೆ ವಹಿಸುವರು.




ಸಂಸದ ಕ್ಯಾ.ಬೃಜೇಶ್ ಚೌಟ ಮತ್ತಿತರ ಗಣ್ಯರು ಭಾಗವಹಿಸುವರು. ರಾತ್ರಿ ತುಳು ನಾಟಕ ಎಲ್ಲೆದಾದ ಏರೆಗ್ ಗೊತ್ತು ಪ್ರದರ್ಶನವಿದೆ. ಮೇ 30 ರಂದು ಬೆಳಗ್ಗೆ ಶ್ರೀ ದೇವರಿಗೆ ಬ್ರಹ್ಮ ಕುಂಭಾಭಿಷೇಕ, ಸಂಗೀತ ಭಜನೆ,ಮಧ್ಯಾಹ್ನ ಬ್ರಹ್ಮ ರಥ ಸಮರ್ಪಣೆ ಸಂಜೆ ಭಜನೆ, ನೃತ್ಯ ರೂಪಕ ಶ್ರೀ ಕೃಷ್ಣ ಲೀಲಾ, ರಾತ್ರಿ ರಂಗಪೂಜೆ, ಉತ್ಸವ, ಬ್ರಹ್ಮ ರಥೋತ್ಸವ ನಡೆಯಲಿದೆ. ಪ್ರತಿದಿನ ಅನ್ನಸಂತರ್ಪಣೆ ಇದೆ ಎಂದು ಅವರು ತಿಳಿಸಿದ್ದಾರೆ.



