ಬೆಳ್ತಂಗಡಿ : ತಾಲೂಕಿನ ಚಾರ್ಮಾಡಿ ಪ್ರದೇಶದಲ್ಲಿರುವ ಅಪಾಯಕಾರಿ ಜಲಪಾತಗಳ ಬಳಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಈ ಮೂಲಕ ಪ್ರವಾಸಿಗರ ಮೋಜು ಮಸ್ತಿಗೆ ಬ್ರೇಕ್ ಹಾಕಲಾಗಿದೆ.
ಮಳೆ ಸುರಿಯುತ್ತಿರುವುದರಿಂದ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಇದರ ಚಂದವನ್ನು ಕಣ್ಣುತುಂಬಿಕೊಳ್ಳುವುದಕ್ಕೆ ಆಗಮಿಸುವ ಪ್ರವಾಸಿಗರು ತಮ್ಮ ಜೀವನ ಹಂಗು ತೊರೆದು ಅಪಾಯಕಾರಿ ಸ್ಥಳಗಳಲ್ಲಿ ನಿಂತು ಸೆಲ್ಪಿ ತೆಗೆದುಕೊಳ್ಳುವುದು ಕಂಡುಬಂದಿತ್ತು.
ಮಾತ್ರವಲ್ಲ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಭಾರಿ ವೈರಲ್ ಆಗಿ, ಆಕ್ರೋಶ ವ್ಯಕ್ತವಾಗಿತ್ತು.

ಇದರಿಂದ ಎಚ್ಚೆತ್ತ ಬಣಕಲ್ ಠಾಣೆಯ ಪೊಲೀಸರು ಜಲಪಾತಗಳ ಬಳಿ ಬ್ಯಾರಿಕೇಡ್ ಇಟ್ಟು ಪ್ರವಾಸಿಗರು ಬಂಡೆಗಳನ್ನು ಹತ್ತದಂತೆ ತಡೆ ಹಿಡಿದಿದ್ದಾರೆ.

ಅಲ್ಲದೆ ಬಂಡೆ ಹತ್ತಿದ್ದು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.
