ಸುಬ್ರಹ್ಮಣ್ಯ : ಎಡೆ ಬಿಡದೆ ಸುರಿಯುತ್ತಿರುವ ವಿಪರೀತ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು ಅನೇಕ ಕಡೆ ಬೃಹತ್ ಮರಗಳು ಧರೆಗುರುಳುತಿದ್ದು ಸಂಚಾರವು ಅಸ್ತವ್ಯಸ್ತಗೊಂಡಿದ್ದು,ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರ ಬಿದ್ದು ಮಗು ಸೇರಿದಂತೆ ನಾಲ್ವರು ಗಾಯಗೊಂಡ ಘಟನೆ ರವಿವಾರ ಸುಬ್ರಹ್ಮಣ್ಯ – ಉಡುಪಿ ರಾಜ್ಯ ಹೆದ್ದಾರಿಯ ಕಡಬ ತಾಲೂಕಿನ ನೂಜಿಬಾಳ್ತಿಲ ಎಂಬಲ್ಲಿ ಸಂಭವಿಸಿದೆ.
ಕುಕ್ಕೆ ಸುಬ್ರಹ್ಮಣ್ಯ ಭಾಗದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರಿನ ಮೇಲೆ ನೂಜಿಬಾಳ್ತಿಲ ಗ್ರಾಮದ ಕನ್ವಾರೆ ಎಂಬಲ್ಲಿ ಬೃಹತ್ ಮರ ಮುರಿದು ಬಿದ್ದಿದೆ. ಘಟನೆಯಿಂದ ಚಾಲಕ, ಇಬ್ಬರು ಮಹಿಳೆಯರು, ಒಂದು ಮಗು ಕಾರಿನಲ್ಲಿ ಸಿಲುಕಿಕೊಂಡಿದ್ದರು. ಕೂಡಲೇ ಕಾರ್ಯಾಚರಣೆ ನಡೆಸಿದ ಸ್ಥಳೀಯರು ಕಾರಿನಲ್ಲಿದ್ದವರು ಹೊರ ತೆಗೆದು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ.
ಕಾರಿನಲ್ಲಿದ್ದವರ ಮುಖ, ಮೈ-ಕೈಗೆ ತೀವ್ರ ತರಹದ ಗಾಯವಾಗಿದೆ ಎಂದು ತಿಳಿದು ಬಂದಿದೆ. ಘಟನೆಯಿಂದ ಕೆಲ ಕಾಲ ವಾಹನ ಸಂಚಾರಕ್ಕೆ ತಡೆ ಉಂಟಾಯಿತು. ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ.



