ಮಂಗಳೂರು:ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಹುಕ್ಕಾ ಬಾರ್ ಗೆ ದಾಳಿ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ನಗರದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕಂಕನಾಡಿ ಮ್ಯಾಕ್ ಮಾಲ್ ನ ಪಾರ್ಕಿಂಗ್ ನಲ್ಲಿರುವ ಕೊಠಡಿಯೊಂದರಲ್ಲಿ ಈ ಹುಕ್ಕಾ ಬಾರ್ ಕಾರ್ಯಾಚರಿಸುತ್ತಿತ್ತು
ಪ್ರಕರಣಕ್ಕೆ ಸಂಬಂಧಪಟ್ಟಂತೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಸಿದ್ದಿಕ್ @ ಎಂ ಎಫ್ ಸಿ ಸಿದ್ದಿಕ್, ಅಬ್ದುಲ್ ನಾಸೀರ್, ಸಫ್ವಾನ್ ಎಂಬವರನ್ನು ಬಂಧಿಸಿದ್ದಾರೆ.

2023-24 ಇಸವಿಯಲ್ಲಿ ಕೆಫೆಟೇರಿಯಾ ನಡೆಸಲು ಮಂಗಳೂರು ಮಹಾನಗರ ಪಾಲಿಕೆಯಿಂದ ಉದ್ದಿಮೆ ಪರವಾನಿಗೆ ಪಡೆದಿದ್ದ ಆರೋಪಿಗಳು ಕೆಫೆಟೇರಿಯಾ ನಡೆಸುವ ನೆಪದಲ್ಲಿ ಅಕ್ರಮ ಹುಕ್ಕಾ ಬಾರ್ ನ್ನು ನಡೆಸುತ್ತಿದ್ದರು ಎನ್ನಲಾಗಿದೆ.
ಇವರು ನಿಯಮಗಳನ್ನು ಉಲ್ಲಂಘಿಸಿ ಯುವಕರನ್ನು ಮಾದಕ ಭ್ರಮಾ ಲೋಕದಲ್ಲಿ ತೇಲಿಸಿ ಹೆಚ್ಚಿನ ಹಣ ಸಂಪಾದಿಸಿ ಅಪರಾಧವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು
, ಹುಕ್ಕಾ ಬಾರ್ ನಿಂದ ಹುಕ್ಕಾ ಸೇದುವ ಉಪಕರಣಗಳು, ತಂಬಾಕು ಉತ್ಪನ್ನಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ರವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ರಫೀಕ್ ಕೆ .ಎಂ ರವರ ನೇತೃತ್ವದಲ್ಲಿ ಪಿಎಸ್ಐ ಸುದೀಪ್ ಎಂ ವಿ, ಶರಣಪ್ಪ ಭಂಡಾರಿ, ಎಎಸ್ಐ ಸುಜನ್ ಶೆಟ್ಟಿ ಹಾಗೂ ಸಿಸಿಬಿ ಸಿಬ್ಬಂದಿಗಳು ಮತ್ತು ಮಂಗಳೂರು ಪೂರ್ವ ಪೊಲೀಸ್ ಠಾಣಾ ಪಿಎಸ್ಐ ಮನೋಹರ್ ಪ್ರಸಾದ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

