ಬೆಂಗಳೂರು: ಕಳ್ಳತನ ಮಾಡಿ ಪದೇ ಪದೇ ಜೈಲಿಗೆ ಹೋಗಿ ಬಂದ್ರು, ಮತ್ತೆ ಕಳ್ಳತನ ಮುಂದುವರಿಸಿದ್ದ ಖತರ್ ನಾಕ್ ಕಳ್ಳನನ್ನು ವಿಚಾರಣೆ ನಡೆಸಿದ ಪೋಲಿಸರಿಗೆ ಖದೀಮ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾನೆ.
ಬೇಗೂರುನಲ್ಲಿ ವಾಸ ಮಾಡೋ ಶಿವು ಅಲಿಯಾಸ್ ಶಿವರಪ್ಪನ್ ನ ಕಳ್ಳತನದ ಕತೆ ಕೇಳಿ ಪೊಲೀಸರೇ ದಂಗಾಗಿದ್ದಾರೆ. ಶಿವು ಅಲಿಯಾಸ್ ಶಿವರಪ್ಪನ್ ಒಮ್ಮೆ ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಯೋಚನೆ ಮಾಡ್ತಿದ್ದ . ಈ ಮಧ್ಯೆ ಆತ ಏರಿಯಾದಲ್ಲಿ ಮಕ್ಕಳ ಸ್ಕೂಲ್ ಫೀಸ್ ಕಟ್ಟೋದಕ್ಕೆ ತನ್ನ ಸ್ನೇಹಿತರು ಒದ್ದಾಡ್ತಿದ್ದನ್ನು ಗಮನಿಸಿದ್ದ. ಇದರಿಂದ ಮನಸ್ಸು ಪರಿವರ್ತನೆಯಾಗಿ ಮಕ್ಕಳ ಸ್ಕೂಲ್ ಫೀಸ್ ಕಟ್ಟಲು ತನ್ನ ಸ್ನೇಹಿತರಾದ ಅನಿಲ್ ಅಲಿಯಾಸ್ ಜಗ್ಗ ಹಾಗೂ ವಿವೇಕ್ನ ಜೊತೆಗೂಡಿ ಕಳ್ಳತನದ ಹಾದಿ ಹಿಡಿದ.

ಈ ಮೂವರು ಬ್ಯಾಡರಹಳ್ಳಿ ಸೇರಿ ಸಾಕಷ್ಟೂ ಮನೆಗಳಿಗೆ ಕನ್ನ ಹಾಕಿ, ಕದ್ದ ಚಿನ್ನಾಭರಣವನ್ನು ತನ್ನ ಸ್ನೇಹಿತರ ಸಹಾಯದಿಂದ ಮಾರಾಟ ಮಾಡ್ತಿದ್ದ. ಪೊಲೀಸರ ಮಾಹಿತಿ ಪ್ರಕಾರ, ತಮಿಳುನಾಡಿನಲ್ಲಿ 22 ಲಕ್ಷಕ್ಕೆ ಶಿವು, ಚಿನ್ನ ಮಾರಾಟ ಮಾಡಿದ್ದ. ಆ ಹಣದಲ್ಲಿ ವಿವೇಕ್ಗೆ 4 ಲಕ್ಷ, ಅನಿಲ್ಗೆ 4 ಲಕ್ಷ ರೂ. ಮೌಲ್ಯದ ಆಟೋ ಕೊಡಿಸಿದ್ದ. ಉಳಿದ 14 ಲಕ್ಷ ರೂ. ಹಣದಲ್ಲಿ ಏರಿಯಾದ 20 ಮಕ್ಕಳಿಗೆ ಶಾಲಾ ಹಾಗೂ ಕಾಲೇಜು ಫೀಸ್ ಕಟ್ಟಿದ್ದಾನೆ.

ಈ ಮೂವರೂ ಕಳ್ಳರನ್ನು ಬಂಧಿಸಿದ ಪೊಲೀಸರು, 24 ಲಕ್ಷ ಮೌಲ್ಯದ 260 ಗ್ರಾಂ ಚಿನ್ನದ ಗಟ್ಟಿಯನ್ನು ಸೀಜ್ ಮಾಡಿದ್ದಾರೆ.
ವಿಚಾರಣೆ ಸಂದರ್ಭದಲಿ ನನ್ನನ್ನ ಜೈಲಿಗೆ ಕಳುಹಿಸಿದ್ರು ಪರವಾಗಿಲ್ಲ. ನಾನು ಕಳ್ಳತನ ಮಾಡೋದು ಮಾತ್ರ ಬಿಡೋದಿಲ್ಲ ಅಂತ ಆರೋಪಿ ಶಿವು ಹೇಳಿಕೊಂಡಿದ್ದಾನೆ. ಅಲ್ಲದೆ ಜೈಲಿಂದ ಹೊರ ಬಂದ್ಮೇಲೆ, ಮತ್ತೆ ಕಳ್ಳತನ ಮಾಡಿ 100ಕ್ಕೂ ಹೆಚ್ಚಿನ ಮಕ್ಕಳ ಸ್ಕೂಲ್ ಫೀಸ್ ಕಟ್ಟಿ ಸಾಯುತ್ತೇನೆ ಎಂದು ಆರೋಪಿ ನೇರವಾಗಿ ಪೊಲೀಸರಿಗೆ ಹೇಳಿದ್ದಾನೆ ಎನ್ನಲಾಗಿದೆ.



