ಸುಳ್ಯ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿ ಕಳೆದ 3 ದಿನಗಳಿಂದ ನಿರಂತರ ಮಳೆಯಾಗುತ್ತಿರುವ ಪರಿಣಾಮ ಸುಳ್ಯದ ಪಯಸ್ವಿನಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳಗೊಂಡಿದೆ.
ನಾಗಪಟ್ಟಣ ಡ್ಯಾಂನ ಗೇಟ್ ತೆರೆದು ನೀರು ಹೊರ ಬಿಡುವ ಬಗ್ಗೆ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ಗಳು ಮಾಹಿತಿ ನೀಡಿದ್ದು, ಸಾರ್ವಜನಿಕರು ನದಿ ನೀರಿಗೆ ಇಳಿಯದಂತೆ ಎಚ್ಚರ ವಹಿಸಲು ಸೂಚಿಸಲಾಗಿದೆ.

ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ತಾಲೂಕಿನ ವಿವಿಧೆಡೆ ಅಸಮರ್ಪಕ ಕಾಮಗಾರಿಯಿಂದ ಮಳೆಗೆ ಮಣ್ಣು ಕೊಚ್ಚಿ ಹೋಗಿದ್ದು, ಹೊಂಡ-ಗುಂಡಿ, ಕೆಸರು ರಸ್ತೆ ನಿರ್ಮಾಣಗೊಂಡಿದೆ.
ಚರಂಡಿ ವ್ಯವಸ್ಥೆ ಅಸ್ತವ್ಯಸ್ಥವಾಗಿದ್ದರ ಪರಿಣಾಮ ಗುರುಂಪು, ಗಾಂಧಿ ನಗರ, ಜೂನಿಯರ್ ಕಾಲೇಜು ರಸ್ತೆ, ಬಿಇಒ ಕಚೇರಿ ಸಮೀಪ ಸೇರಿದಂತೆ ನಗರ ವಿವಿಧೆಡೆ ಮಳೆ ನೀರು ರಸ್ತೆಯಲ್ಲೇ ಸಂಗ್ರಹಗೊಂಡು ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ.


