ಬಾಗಲಕೋಟೆ: ಹಸೆಮಣೆ ಏರಿದ ಯುವಕ ತಾಳಿ ಕಟ್ಟಿ, ಆರತಕ್ಷತೆಗೆ ನಿಲ್ಲುವ ಮುನ್ನವೇ ಕುಸಿದು ಬಿದ್ದು ಹೃದಯಘಾತದಿಂದ ಯುವಕ ಸಾವನ್ನಪ್ಪಿದ್ದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಇಲ್ಲಿನ ಜಮಖಂಡಿ ನಗರದ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿದ್ದು ಮದು ಮಗ ಪ್ರವೀಣ ಕುರಣಿ ಎಂಬಾತ ಮೃತಪಟ್ಟ ದುರ್ದೈವಿಯಾಗಿದ್ದಾನೆ.


ಕಲ್ಯಾಣಮಂಟಪಕ್ಕೆ ಆಗಮಿಸಿದ ನವ ದಂಪತಿಗೆ ಬಂಧು-ಮಿತ್ರರು ಆರತಕ್ಷತೆ ಹಾಕಿ ಆಶೀರ್ವದಿಸುವ ಗಳಿಗೆಯಲ್ಲೆ ಯಾರೂ ಊಹಿಸದ ದುರ್ಘಟನೆ ನಡೆದಿದ್ದು, ಹಠಾತ್ ಹೃದಯಾಘಾತಕ್ಕೆ ವರ ಪ್ರವೀಣ್ ಸಾವನ್ನಪ್ಪಿದ್ದಾನೆ.

ಮದುವೆಯಾಗಿ ಹೊಸ ಜೀವನ ಶುರು ಮಾಡುವ ಕನಸು ಕಂಡಿದ್ದ ಯುವಕ ಪ್ರವೀಣ ಕುರಣಿ ಮಂಟಪದಲ್ಲೇ ಕೊನೆಯುಸಿರೆಳೆದಿದ್ದಾನೆ. ಯುವಕನ ಜೊತೆ ಮದುವೆಯಾಗಿ ಹೊಸ ಬದುಕು ನಡೆಸುವ ನೂರಾರು ಕನಸುಕಂಡಿದ್ದ ವಧುವಿನ ಹೃದಯ ಕೂಡ ಈ ಘಟನೆ ನೋಡಿ ನುಚ್ಚು ನೂರಾಗಿದೆ.

ತಾಳಿ ಕಟ್ಟಿಸಿಕೊಂಡ ಖುಷಿ ಗಂಟೆಯಲ್ಲೇ ಕೊನೆಯಾಗಿದೆ. ಮದುವೆ ಸಂಭ್ರಮದಲ್ಲಿ ನಗು ನಗುತ್ತಿದ್ದ ಮನೆಯಲ್ಲಿ ಕ್ಷಣ ಮಾತ್ರದಲ್ಲೇ ಸೂತಕದ ಛಾಯೆ ಆವರಿಸಿದೆ.
ಗಂಡನ ಅಕಾಲಿಕ ಸಾವು ನೋಡಿ ಅಘಾತಕ್ಕೊಳಗಾದ ಯುವತಿ ಮಂಟಪದಲ್ಲೇ ಕಣ್ಣೀರು ಹಾಕಿದ್ದಾಳೆ. ಇತ್ತ ಮದುವೆ ಸಂಭ್ರಮದಲ್ಲೇ ಮಗನನ್ನು ಕಳೆದುಕೊಂಡ ಪೋಷಕರ ದುಃಖ ಮುಗಿಲು ಮುಟ್ಟಿದೆ.
