ಮಂಗಳೂರು: ಇತ್ತೀಚಿಗೆ ಪರೀಕ್ಷಾ ಕೇಂದ್ರವೊಂದರಲ್ಲಿಪರೀಕ್ಷೆ ಬರೆಯಲು ವಿದ್ಯಾರ್ಥಿಯ ಜನಿವಾರ ತುಂಡರಿಸಿದ ಘಟನೆ ಗೆ ಸಂಭಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳಲ್ಲಿ ಅನಗತ್ಯ ಉಪಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ಗೊಂದಲಗಳನ್ನು ಉಂಟು ಮಾಡದಂತೆ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.
ಬೀದರ್ ಮತ್ತು ಶಿವಮೊಗ್ಗ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಜನಿವಾರ ಹಾಗೂ ಕೈ ದಾರಗಳನ್ನು ಬಲವಂತವಾಗಿ ತೆಗಿಸಿ ವಿದ್ಯಾರ್ಥಿಗಳ ಧಾರ್ಮಿಕ ಮನೋಭಾವನೆಗೆ ಫಾಸಿ ಉಂಟು ಮಾಡಿರುವುದು ದುರದೃಷ್ಟಕರ ಸಂಗತಿ, ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನ್ಯಾಯ ಸಮ್ಮತವಾಗಿ ನಡೆಸಲು ಹಲವಾರು ರೀತಿಯಾದಂತಹ ಸೂಕ್ತ ನಿರ್ಬಂಧನೆಗಳು ಇರುವುದು ಸಹಜ.
ಆದರೆ ನಿರ್ಬಂಧನೆಗಳ ನೆಪದಲ್ಲಿ ಯಾವುದೇ ಆಧಾರವಿಲ್ಲದೆ ಅಥವಾ ಮಾರ್ಗಸೂಚಿಗಳಲ್ಲಿ ಉಲ್ಲೇಖವಿಲ್ಲದ ಹಲವು ತಪ್ಪು ಉಪಕ್ರಮಗಳನ್ನು ಕೈಗೊಳ್ಳುವಂತಹ ನಿರ್ದೇಶನಗಳು ನಮ್ಮ ಮುಂದಿವೆ. ಅಂತಹ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರದ ಅಧಿಕಾರಿಗಳು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳುವುದು ಅಪೇಕ್ಷಣೀಯ. ಆದರೆ ಯಾವುದೇ ಸೂಕ್ತ ಪರಿಜ್ಞಾನವಿಲ್ಲದೆ, ಸೂಕ್ತ ಸಕಾರಣಗಳಿಲ್ಲದೆ ವಿದ್ಯಾರ್ಥಿಗಳ ಮನೋಸ್ಥೆರ್ಯವನ್ನು ಕುಗ್ಗಿಸುವಂತಹ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುವಂತಹ ಉಪಕ್ರಮಗಳು ಅತ್ಯಂತ ಖಂಡನೀಯ. ಈ ರೀತಿಯಾದ ಪ್ರಕರಣಗಳು ಮರುಕಳಿಸದಂತೆ ಸರ್ಕಾರ ಹಾಗೂ ಪರೀಕ್ಷಾ ಮಂಡಳಿಗಳು ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಿ ಜಾರಿಗೊಳಿಸಿ ಹಾಗೂ ಪರೀಕ್ಷಾ ಕೇಂದ್ರದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ ಎಂದು ಮೋನಿಶ್ ತುಮಿನಾಡು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.

