ಸಿದ್ದಕಟ್ಟೆ: ಬಂಟ್ವಾಳ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಕಡತಗಳು ವಿಲೇವಾರಿಯಾಗದೆ ಬಾಕಿ ಆಗಿ ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದು ಈ ಕುರಿತು ಬಾಕಿ ಉಳಿದಿರುವ ಕಡತಗಳ ಶೀಘ್ರ ವಿಲೇವಾರಿಗೆ ಆಗ್ರಹಿಸಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
ಬಂಟ್ವಾಳ ತಾಲೂಕಿನಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳು ಸಮಯಕ್ಕೆ ಸರಿಯಾಗಿ ಪರಿಹಾರ ಆಗದೇ ತಿಂಗಳುಗಟ್ಟಲೇ ,ವರ್ಷಗಟ್ಟಲೇ ವಿಳಂಬವಾಗುತ್ತಿದ್ದು ,ಸಂಬಂಧಪಟ್ಟ ಜನಸಾಮಾನ್ಯರು ತಮ್ಮ ಆಳಲನ್ನು ಸಾರ್ವಜನಿಕ ಸ್ಥಳಗಳಲ್ಲಿ ತೋಡಿಕೊಳ್ಳುತ್ತಿದ್ದಾರೆ.ದರ್ಖಾಸು ಜಮೀನು ಸೇರಿದಂತೆ ಪ್ಲೋಟಿಂಗ್ ಆಗದ ಜಮೀನಿಗೆ ಸಂಬಂಧಿಸಿದಂತೆ ಸಾರ್ವಜನಿಕರು 1-5 ಗೆ ಅರ್ಜಿ ಕೊಟ್ಟು 5-6 ವರ್ಷಗಳೂ ಕಳೆದರೂ ಸಹ ಕಡತಗಳಿಗೆ ಮುಕ್ತಿ ಸಿಗುತ್ತಿಲ್ಲ.
1-5 ಪ್ಲೋಟಿಂಗ್ ಸಂಬಂಧಿಸಿದ ತಮ್ಮ ಕಡತಗಳು ಬಂಟ್ವಾಳ ತಾಲೂಕು ತಹಸೀಲ್ದಾರರಿಂದ ಮಂಗಳೂರು ಸಹಾಯಕ ಆಯುಕ್ತರ ಕಛೇರಿಗೆ 10-20 ಬಾರಿ ಅಲೆದಾಡುತ್ತಿದ್ದು,ಅಧಿಕಾರಿಗಳು ಮಾತ್ರ ಕಡತಗಳಿಗೆ ಮುಕ್ತಿ ನೀಡುತ್ತಿಲ್ಲ. ಕಡತ ಪರಿಪೂರ್ಣತೆಗೆ ಬೇಕಾದ ದಾಖಲೆಗಳನ್ನು ತಾಲೂಕು ಕಛೇರಿಯ ಅಧಿಕಾರಿಗಳು ಜೋಡಿಸಬೇಕೇ ಹೊರತು ಅರ್ಜಿದಾರರಲ್ಲ.ಆದರೆ ಕಂದಾಯ ಅಧಿಕಾರಿಗಳು ಅರ್ಜಿದಾರರನ್ನು ಸತಾಯಿಸುತ್ತಿದ್ದಾರೆಂದು ಹೇಳುತ್ತಿದ್ದಾರೆ. ಕೆಲವೊಂದು ಅರ್ಜಿದಾರರು ಪ್ಲೋಟಿಂಗ್ ಸಮಸ್ಯೆಯ ಬಗ್ಗೆ ತಹಸೀಲ್ದಾರನ್ನು ಖುದ್ದಾಗಿ ಭೇಟಿಯಾಗಿ ಸಮಸ್ಯೆ ಹೇಳೀದರೂ ಬಂಟ್ವಾಳ ತಹಸೀಲ್ದಾರರಿಂದ ಸಕರಾತ್ಮಕ ಸ್ಪಂದನೆ ಸಿಗುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ . ಮತ್ತೆ ಕೆಲವರೂ ಮಂಗಳೂರು ಸಹಾಯಕ ಆಯುಕ್ತರ ಗಮನಕ್ಕೆ ತಂದರೂ ಕಡತಕ್ಕೆ ಪರಿಪೂರ್ಣತೆ ಸಿಗುತ್ತಿಲ್ಲ.
ಬಂಟ್ವಾಳ ತಾಲೂಕಿನಲ್ಲಿ 1-5 ಪ್ಲೋಟಿಂಗ್ , ನಿರಪೇಕ್ಷಣಾ ಪತ್ರ ನೀಡಿಕೆ ಸಮಸ್ಯೆ,ಭೂ ಪರಿವರ್ತನೆ ಸಮಸ್ಯೆ, ಪಡಿತರ ಚೀಟಿ ಹೆಸರು ಸೇರ್ಪಡೆ ಸಮಸ್ಯೆ, ಸರ್ವರ್ ಸಮಸ್ಯೆ ಸೇರಿದಂತೆ ಎಲ್ಲಾ ಕೆಲಸ ಕಾರ್ಯಗಳು ಜನಸಾಮಾನ್ಯರಿಗೆ ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ.
“ಬಂಟ್ವಾಳ ತಾಲೂಕಿನಲ್ಲಿ ಪ್ರಗತಿಯಲ್ಲಿರುವ ಸೇತುವೆ ಕಾಮಗಾರಿ ಮತ್ತು ರಸ್ತೆ ಕಾಮಗಾರಿಗಳನ್ನು ವೀಕ್ಷಿಸಿ ಪರಿಶೀಲನೆ ಮಾಡುತ್ತಿರುವ ಜಿಲ್ಲಾಧಿಕಾರಿಗಳು ಬಡ ಜನಸಾಮಾನ್ಯರ ಅತೀ ಅಗತ್ಯದ ಕೆಲಸ ಕಾರ್ಯಗಳ ಕಡತಗಳನ್ನು ಸಹ ಅಷ್ಟೇ ಮುತುವರ್ಜಿಯಿಂದ ತ್ವರಿತವಾಗಿ ಅತೀ ಶೀಘ್ರವಾಗಿ ವಿಲೇವಾರಿ ಮಾಡಬೇಕಾಗಿದೆ ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ.
ಈ ಎಲ್ಲಾ ಹಿನ್ನಲೆಯಲ್ಲಿ ತಾವು ಬಂಟ್ವಾಳ ತಾಲೂಕು ಕಛೇರಿಗೆ ಭೇಟಿ ನೀಡಿ ಸಾರ್ವಜನಿಕರ ಬಾಕಿ ಉಳಿದಿರುವ ದಿನನಿತ್ಯದ ಕೆಲಸ ಕಾರ್ಯಗಳ ಕಡತಗಳನ್ನು ವಿಲೇವಾರಿ ಮಾಡಬೇಕಾಗಿ ಈ ಮೂಲಕ ವಿನಂತಿ.



