ಬಂಟ್ವಾಳ: ಸಜಿಪ ಮಾಗಣೆ ಶ್ರೀ ನಡಿಯೇಳು ದೈವಂಗಳು ಶ್ರೀ ಉಳ್ಳಾಲ್ದಿ ಶ್ರೀ ನಾಲ್ಕೈತಾಯ ಹಾಗೂ ಪರಿವಾರ ದೈವಗಳ ಕ್ಷೇತ್ರ ಮಿತ್ತ ಮಜಲು ಪುನರ್ ನಿರ್ಮಾಣಗೊಂಡ ಮೂರು ಗೋಪುರಗಳ ಲೋಕಾರ್ಪಣೆ ಏಪ್ರಿಲ್ 2 ಹಾಗೂ 3ರಂದು ಬ್ರಹ್ಮಶ್ರೀ ನೀಲೇಶ್ವರ ಕೆ. ಉಚ್ಚಿಲತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರಗಲಿದ್ದು ಇದರ ಪೂರ್ವಭಾವಿ ಸಭೆಯು ಭಾನುವಾರದಂದು ಶ್ರೀ ಕ್ಷೇತ್ರದಲ್ಲಿ ಜರಗಿತು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಬಟ್ ಮಾತನಾಡಿ ದೈವರಾಧನೆಯಲ್ಲಿ ವೈಶಿಷ್ಟ್ಯತೆಯನ್ನು ಹೊಂದಿರುವ ಕ್ಷೇತ್ರ ಇದಾಗಿದ್ದು ಅಂದಾಜು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡು ಜರಗುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಾಗಣೆಯ ಎಲ್ಲಾ ಭಕ್ತರು ಪಾಲ್ಗೊಂಡು ಹಲವು ಶತಮಾನಗಳಿಗೊಮ್ಮೆ ದೊರೆಯುವ ಇಂತಹ ಪುಣ್ಯ ಕಾರ್ಯದಲ್ಲಿ ಎಲ್ಲರೂ ತನುಮನ ಧನಗಳಿಂದ ಸಹಕರಿಸುವಂತೆ ವಿನಂತಿಸಿದರು.
ಗೌರವಾಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ಮಾತನಾಡಿ ಕ್ಷೇತ್ರದ ಅಭಿವೃದ್ಧಿಯ ಎಲ್ಲಾ ಕೆಲಸ ಕಾರ್ಯಗಳು ಸಾಕಾರಗೊಳ್ಳುವಲ್ಲಿ ಎಲ್ಲಾ ಭಕ್ತರು ಕೈಜೋಡಿಸುವಂತೆ ವಿನಂತಿಸಿದರು. ವೇದಿಕೆಯಲ್ಲಿ ಜಯಶಂಕರ ಬಾಸ್ರಿತಾಯ, ಸತೀಶ್ ಪೆರ್ಗಡೇ ಕಾಂತಾಡಿ ಗುತ್ತು, ಎಸ್. ಶ್ರೀಕಾಂತ್ ಶೆಟ್ಟಿ, ದೇವಿ ಪ್ರಸಾದ್ ಪೂoಜ, ರತ್ನಾಕರ ನಾಡರು ಉಪಸ್ಥಿತರಿದ್ದರು. ಮಾಗಣೆಯ ಸಾಂಸ್ಕೃತಿಕ ಧಾರ್ಮಿಕ ಶೈಕ್ಷಣಿಕ ಸಾಮಾಜಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಲಹೆ ಸೂಚನೆಗಳನ್ನು ನೀಡಿದರು.
ಬಂಟ್ವಾಳ ತಾಲೂಕು ನೌಕರ ಸಂಘದ ಅಧ್ಯಕ್ಷ ಕೆ. ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.



