ವಿಟ್ಲ: ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ಸೇವಾ ಸಮಿತಿ, ಕ್ರಿಯಾ ಸಮಿತಿ, ಹವ್ಯಕಮಹಾಮಂಡಲ, ಮಂಗಳೂರು, ಉಪ್ಪಿನಂಗಡಿ ಮತ್ತು ಮುಳ್ಳೇರಿಯ ಹವ್ಯಕ ಮಂಡಲಗಳ ಆಶ್ರಯದಲ್ಲಿ ಸಂಧ್ಯಾ ಮಂಗಲ ಕಾರ್ಯಕ್ರಮ ನಡೆಯಿತು.
ಆಶೀರ್ವಚನ ನೀಡಿದ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು, ವೃದ್ಧಿಯನ್ನು ಹೊಂದಿದವರು ವೃದ್ಧರು ಮತ್ತು ಅವರ ಅನುಭವ, ಅಂತರಂಗ ವಿಕಾಸವಾಗಿರುತ್ತದೆ. ಹಿರಿಯರು ಭಗವಂತನ ಕೊಂಡಿಗಳು. ಆ ಕೊಂಡಿ ಕಳಚಿಹೋಗದಂತೆ ನೋಡಿಕೊಳ್ಳಬೇಕು. ಜೀವನ ಮಂಗಳಮಯವಾಗಿರಬೇಕು. ಸಮಾಜ ಹಿರಿಯರನ್ನು ಗೌರವಿಸಬೇಕು. ಹಿರಿಯರನ್ನು ಅಲಕ್ಷಿಸಬಾರದು. ಹಿರಿತನ ಶ್ರೇಷ್ಠವಾದುದು.ಅಂತರ್ಮುಖಿಯಾಗುವ ಕಾಲ. ಮಠವು ತಂದೆ ಮತ್ತು ಮಕ್ಕಳ ಸ್ಥಾನದಲ್ಲಿ ನಿಂತು ಈ ಕಾರ್ಯ ಮಾಡಿದೆ. ವೃದ್ಧಾಪ್ಯದಲ್ಲಿ ನೆಮ್ಮದಿ, ಆರೋಗ್ಯ ಸ್ಥಿರವಾಗಿ ಕರುಣಿಸಲೆಂಬ ಆಶಯವಿದೆ. ಹಿರಿಯರು ಮುಂದಿನ ಪೀಳಿಗೆಗೆ ಪುಣ್ಯ ಸಂಚಯಕ್ಕಾಗಿ ದೇಶ ಸೇವೆ, ಸಮಾಜ ಮತ್ತು ಶ್ರೀ ಮಠದ ಸೇವೆ ಮಾಡಬೇಕು. ಸಮಾಜ ಉಳಿಯಬೇಕು, ವಂಶವೃದ್ಧಿಯಾಗಿಸುವ ನಿಟ್ಟಿನಲ್ಲಿ ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು ಸದ್ಯದಲ್ಲೇ ವಾನಪ್ರಸ್ಥ ಅಗ್ರಹಾರ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು .
ಶಕಟಪುರ ಶ್ರೀ ಕೃಷ್ಣಾನಂದ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಗುರುವಿನ ಮಂತ್ರೋಪದೇಶದಿಂದ ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದು. ಸದ್ಗುರುವಿನ ಅನುಗ್ರಹದಿಂದ ಜನ್ಮ ಸಾರ್ಥಕವಾಗುತ್ತದೆ. 60 ವರ್ಷ ಮೀರಿದವರಿಗೆ ಸಂಧ್ಯಾ ಮಂಗಲ ಕಾರ್ಯಕ್ರಮ ಮರುಜನ್ಮ ನೀಡಿದೆ. ಮುಂದಿನ ಭವಿಷ್ಯ ಉಜ್ವಲವಾಗಲೆಂದು ಹೇಳಿದರು.
ಶ್ರೀ ಮಠದ ಪ್ರಶಸನಾಧಿಕಾರಿ ಸಂತೋಷ್ ಹೆಗಡೆ, ಪಿಆರ್ ಒ ಹರಿಪ್ರಸಾದ್ ಪೆರಿಯಾಪು, ಮಾಣಿಮಠ ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್,ಮಹಾಮಂಡಲ ಅಧ್ಯಕ್ಷ ಮೋಹನಭಾಸ್ಕರ ಹೆಗಡೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಉಪಾಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ, ವಿವಿವಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಮಂಗಳೂರು ಮಂಡಲ ಅಧ್ಯಕ್ಷ ಉದಯಶಂಕರ್ ನೀರ್ಪಾಜೆ, ಉಪಾಧ್ಯಕ್ಷ ರಾಜಶೇಖರ ಕಾಕುಂಜೆ, ಕಾರ್ಯದರ್ಶಿ ರಮೇಶ್ ಭಟ್ ಸರವು, ಮಂಗಳೂರು ಮಂಡಲ ಪ್ರಧಾನ ಗುರಿಕ್ಕಾರರಾದ ಉದಯ ಕುಮಾರ ಖಂಡಿಗ, ಉಪ್ಪಿನಂಗಡಿ ಮಂಡಲಾಧ್ಯಕ್ಷ ಈಶ್ವರಪ್ರಸನ್ನ ಪೆರ್ನೆಕೋಡಿ, ಕಾರ್ಯದರ್ಶಿ ಮಹೇಶ ಭಟ್, ಮುಳ್ಳೇರಿಯ ಮಂಡಲಾಧ್ಯಕ್ಷ ಕೃಷ್ಣಮೂರ್ತಿ ಮಾಡಾವು, ಕಾರ್ಯದರ್ಶಿ ಸುರೇಶ್ ಭಟ್, ಮಾತೃತ್ವಮ್ ಸಂಘಟನೆ ಅಧ್ಯಕ್ಷೆ ಈಶ್ವರಿ ಬೇರ್ಕಡವು ಮತ್ತಿತರರು ಉಪಸ್ಥಿತರಿದ್ದರು.




