ದೇವನಹಳ್ಳಿ: ವಿದ್ಯುತ್ ತಂತಿ ಸರಿಪಡಿಸಲು ಕಂಬ ಹತ್ತಿದ್ದ ಹೊರಗುತ್ತಿಗೆ ಲೈನ್ಮೆನ್ವೊಬ್ಬರು ವಿದ್ಯುತ್ ಸ್ಪರ್ಶಿಸಿ ಕಂಬದಲ್ಲೇ ಮೃತಪಟ್ಟಿರುವ ಘಟನೆ ದೇವನಹಳ್ಳಿಯಲ್ಲಿ ನಡೆದಿದೆ.

ಚಳ್ಳಕೆರೆ ಮೂಲದ ಪಾಲಯ್ಯ (42) ಮೃತಪಟ್ಟ ಲೈನ್ಮೆನ್. ಕಳೆದ ಎರಡು ವರ್ಷಗಳಿಂದ ದೇವನಹಳ್ಳಿ ಬೆಸ್ಕಾಂ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಲೈನ್ಮೆನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಬೊಮ್ಮನಹಳ್ಳಿ ರಸ್ತೆಯ ಐಶ್ವರ್ಯ ಬಡಾವಣೆ ಸಮೀಪದ ವಿದ್ಯುತ್ ಕಂಬದಲ್ಲಿ ಜಂಪರ್ ಕಟ್ಟಾಗಿರುವ ಕುರಿತು ದೂರು ಬಂದಿತ್ತು. ಮೇಸ್ತ್ರಿ ನೀಡಿದ ಸೂಚನೆಯ ಮೇರೆಗೆ ಪಾಲಯ್ಯ ಸ್ಥಳಕ್ಕೆ ತೆರಳಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದನ್ನು ಖಚಿತಪಡಿಸಿಕೊಳ್ಳದೆ ಕಂಬ ಹತ್ತಿದ್ದಾರೆ ಎನ್ನಲಾಗಿದೆ.

ವಿದ್ಯುತ್ ತಂತಿ ಸರಿಪಡಿಸುವ ವೇಳೆ ಏಕಾಏಕಿ ವಿದ್ಯುತ್ ಸ್ಪರ್ಶಿಸಿದ ಪರಿಣಾಮ ಪಾಲಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


