ಕಾಸರಗೋಡು: ಚಾಲಕನ ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯೊಂದು ಮನೆಯ ಮೇಲೆ ಉರುಳಿ ಬಿದ್ದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಮಡಿಕೈನ ಕಂಜಿರಪೊಯಿಲ್ನ ಕುಳಂಗಡ್ನಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

ಮೃತರನ್ನು ಚಾಯ್ಯೋಂ ನಿವಾಸಿ ಸಾದಿಕ್ (40) ಎಂದು ಗುರುತಿಸಲಾಗಿದೆ.
ಟಿಪ್ಪರ್ ಲಾರಿಯಲ್ಲಿ ಕೆಂಪು ಮಣ್ಣು ಸಾಗಿಸಲಾಗುತ್ತಿತ್ತು. ಮಣ್ಣು ಇಳಿಸಿದ ಬಳಿಕ ಸಾದಿಕ್ ಲಾರಿಯನ್ನು ಮುಂದಕ್ಕೆ ಚಲಾಯಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿದೆ. ಪರಿಣಾಮ ಲಾರಿ ರಸ್ತೆ ಬದಿಯಲ್ಲಿದ್ದ ಪಿ. ಗೋಪಾಲನ್ ಎಂಬುವರಿಗೆ ಸೇರಿದ ಮನೆಯ ಮೇಲೆ ಉರುಳಿ ಬಿದ್ದಿದೆ.

ಅಪಘಾತದಲ್ಲಿ ಮನೆಯ ಅಡುಗೆಮನೆ ಸಂಪೂರ್ಣ ಹಾನಿಗೊಳಗಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಸಾದಿಕ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.



