ಬಂಟ್ವಾಳ: ಸಾಮಾಜಿಕ ಜಾಲತಾಣದ ಮೂಲಕ ಒಟ್ಟಾಗಿ ಕಳೆದ ವರ್ಷಗಳಲ್ಲಿ 600 ಅಧಿಕ ಕುಟುಂಬಗಳಿಗೆ 1 ಕೋಟಿ ರೂ. ಗಳಿಗೂ ಮಿಕ್ಕಿ ನೆರವು ನೀಡುತ್ತಾ ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ಇದರ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮ ಆ.30ರಂದು ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.

ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಆಸ್ರಣ್ಣರಾದ ಕೆ.ವೆಂಕಟರಮಣ ಆಸ್ರಣ್ಣ ಅವರು ಕಾರ್ಯಕ್ರಮ ಉದ್ಘಾಟಿಸಲಿರುವರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಸಹಿತ ವಿವಿಧ ಕ್ಷೇತ್ರಗಳ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿರುವರು.

ಒಡಿಯೂರು ಕ್ಷೇತ್ರದ ಶ್ರೀ ಗುರು ದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಲಿರುವರು. ರವಿ ಕಟಪಾಡಿ ಅವರಿಗೆ ತುಳುನಾಡ ಪೊರ್ಲು ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಸೇವಾ ಸಂಸ್ಥೆಗಳಿಗೆ ಗೌರವಾರ್ಪಣೆ, 10ಅಶಕ್ತ ಕುಟುಂಬಗಳಿಗೆ ಧನ ಸಹಾಯ, 100ಅಶಕ್ತ ಕುಟುಂಬಗಳಿಗೆ ದಿನಸಿ ಸಾಮಾಗ್ರಿ ವಿತರಣೆ ನಡೆಯಲಿದೆ ಎಂದು ಸಂಘದ ಸ್ಥಾಪಕ, ಅಧ್ಯಕ್ಷ ನೀತು ಅಜಿಲಮೊಗರು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


