ಮಂಗಳೂರು: ‘ಅಖಂಡ ಭಾರತ ಸಂಕಲ್ಪ ದಿನ’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತವು ಬಜರಂಗದಳ ವಿಭಾಗ ಸಂಯೋಜಕ ಪುನೀತ್ ಅತ್ತಾವರ ಅವರ ಉಡುಪಿ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸಿದೆ.

ವಿಹಿಂಪ ಬಜರಂಗದಳ ವತಿಯಿಂದ ಆಯೋಜಿಸುವ ‘ಅಖಂಡ ಭಾರತ ಸಂಕಲ್ಪ ದಿನ’ವು ದೇಶಭಕ್ತಿಯ ಸದ್ಭಾವನೆಯ ಕಾರ್ಯಕ್ರಮವಾಗಿದೆ. ಭಾರತದ ವಿಭಜನೆಯ ಕರಾಳ ಇತಿಹಾಸ, ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾಪುರುಷರು ಹಾಗೂ ಕ್ರಾಂತಿಕಾರಿಗಳನ್ನು ಸ್ಮರಿಸುವ ಮೂಲಕ ಯುವಜನರಲ್ಲಿ ರಾಷ್ಟ್ರಪ್ರೇಮ ಮೂಡಿಸುವ ಉದ್ದೇಶವನ್ನು ಕಾರ್ಯಕ್ರಮ ಹೊಂದಿದೆ. ಇದರಲ್ಲಿ ಯಾವುದೇ ಕೋಮುದ್ವೇಷ ಅಥವಾ ಪ್ರಚೋದನಕಾರಿ ಅಂಶಗಳಿಲ್ಲ ಎಂದು ವಿಹಿಂಪ ಹೇಳಿದೆ.

ಆದರೆ, ಸಂಪೂರ್ಣ ಸತ್ಯಾಸತ್ಯತೆ ಪರಿಶೀಲಿಸದೆ ಪುನೀತ್ ಅತ್ತಾವರ ಅವರಿಗೆ ಉಡುಪಿ ಜಿಲ್ಲೆಗೆ ಪ್ರವೇಶಿಸದಂತೆ ಆದೇಶಿಸಿರುವುದು ಖಂಡನೀಯ ಹಾಗೂ ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ಸಂಘಟನೆ ಆರೋಪಿಸಿದೆ.

ಉಡುಪಿ ಜಿಲ್ಲಾಡಳಿತದ ಏಕಪಕ್ಷೀಯ ಕ್ರಮವನ್ನು ಬಲವಾಗಿ ಖಂಡಿಸಿರುವ ವಿಹಿಂಪ, ತಕ್ಷಣ ಪ್ರವೇಶ ನಿರ್ಬಂಧವನ್ನು ಹಿಂಪಡೆಯುವಂತೆ ಆಗ್ರಹಿಸಿದೆ.



