ವಿಟ್ಲ: ಒಮ್ನಿ ಕಾರು ಮತ್ತು ಜೀಪು ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಆರು ಮಂದಿ ಗಾಯಗೊಂಡು, ಎರಡೂ ವಾಹನಗಳು ನಜ್ಜುಗುಜ್ಜಾದ ಘಟನೆ ಜೂನ್ 24ರ ಬುಧವಾರ ಕೇಪು ಗ್ರಾಮದ ಪಡಿಬಾಗಿಲು–ಮೈರ ನಡುವಿನ ತಿರುವಿನಲ್ಲಿ ನಡೆದಿದೆ.

ವಿಟ್ಲ ಕಡೆಯಿಂದ ಬಾಯಾರು ಕಡೆಗೆ ತೆರಳುತ್ತಿದ್ದ ಜೀಪು ಹಾಗೂ ಉಪ್ಪಿನಂಗಡಿ ಕಡೆಗೆ ಸಾಗುತ್ತಿದ್ದ ಒಮ್ನಿ ವಾಹನ ಅಂತಾರಾಜ್ಯ ಹೆದ್ದಾರಿಯ ಮೈರ ಭಾಗದಲ್ಲಿ ಮುಖಾಮುಖಿ ಢಿಕ್ಕಿಯಾಗಿದೆ.

ಢಿಕ್ಕಿಯ ತೀವ್ರತೆಗೆ ಒಮ್ನಿಯಲ್ಲಿದ್ದ ಒಬ್ಬರು ವಾಹನದಿಂದ ಹೊರಗೆ ರಸ್ತೆಗೆಸೆಯಲ್ಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಆಮ್ನಿ ಚಾಲಕ ಕೃಷ್ಣ, ಪ್ರಕಾಶ್, ಸುಜಾತಾ, ಸುಮಂಗಳ, ಶರಣ್ಯ ಹಾಗೂ ಜೀಪಿನಲ್ಲಿದ್ದ ಉದಯನಾರಾಯಣ ಭಟ್ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ. ಅಪಘಾತದಿಂದ ಕೆಲಕಾಲ ಸಂಚಾರಕ್ಕೂ ಅಡಚಣೆ ಉಂಟಾಯಿತು.


