ಉಳ್ಳಾಲ: ಚಾಲಕನ ರಕ್ತದೊತ್ತಡ ಕಡಿಮೆಯಾದ ಪರಿಣಾಮ ಬಸ್ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿದ ಘಟನೆ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯ ಸಮೀಪ ಮಂಗಳವಾರ ನಡೆದಿದೆ.

ಗಂಭೀರ ಸ್ಥಿತಿಯಲ್ಲಿದ್ದ ಚಾಲಕ ಜನಾರ್ದನ ಅವರನ್ನು ಬಸ್ ನಿರ್ವಾಹಕ ಹಾಗೂ ಪ್ರಯಾಣಿಕರು ತಕ್ಷಣ ಆಂಬುಲೆನ್ಸ್ ಮೂಲಕ ಯೆನೆಪೋಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಂಗಳೂರಿನಿಂದ ಮುಡಿಪು ಕಡೆಗೆ ಸಂಚರಿಸುತ್ತಿದ್ದ ಗೋಪಾಲಕೃಷ್ಣ ಬಸ್, ಯೆನೆಪೋಯ ಆಸ್ಪತ್ರೆ ಸಮೀಪ ತಲುಪಿದಾಗ ಚಾಲಕ ಜನಾರ್ದನ ಅವರಿಗೆ ರಕ್ತದೊತ್ತಡ ಕಡಿಮೆಯಾಗಿದೆ. ಇದರಿಂದ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿ, ಚಾಲನೆಯಲ್ಲಿದ್ದ ಬಸ್ ಮೇಲಿನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿದೆ.

ಘಟನೆಯ ತಕ್ಷಣ ಸ್ಥಳದಲ್ಲಿದ್ದವರು ಹಾಗೂ ಪ್ರಯಾಣಿಕರು ಚಾಲಕರಿಗೆ ನೆರವಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಬಸ್ನಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.


