ಸಿದ್ದಕಟ್ಟೆ: ಭಾರತದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರ 12 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಹಾಗೂ ನರೇಂದ್ರ ಮೋದಿಯವರು ದೀರ್ಘಾವಧಿ ಚುನಾಯಿತ ಪ್ರಧಾನಮಂತ್ರಿಯಾಗಿ ದಾಖಲೆ ನಿರ್ಮಿಸಿರುವ ಪ್ರಯುಕ್ತ ಭಾರತೀಯ ಜನತಾ ಪಕ್ಷದ ವತಿಯಿಂದ ಸಿದ್ದಕಟ್ಟೆ ಸಮೀಪದ ಶ್ರೀ ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ನೆರವೇರಿಸಲಾಯಿತು.

ಮೋದಿಜಿಯವರ ರಾಜಕೀಯ ಭವಿಷ್ಯ, ಬಿಜೆಪಿ ಪಕ್ಷದ ಅಭಿವೃದ್ಧಿ ಮತ್ತು ದೇಶದ ಆರ್ಥಿಕ ಪ್ರಗತಿಗಾಗಿ ವಿಶೇಷ ಹೂವಿನ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಕೃಷ್ಣ ಪ್ರಸಾದ್ ಅಸ್ರಣ್ಣ ಅವರು ವಿಶೇಷ ಪೂಜೆ ನೆರವೇರಿಸಿ ದೇಶಕ್ಕೆ ಎದುರಾಗುವ ಆಪತ್ತುಗಳು ದೂರವಾಗಲಿ, ಪ್ರಧಾನಿ ಮೋದಿಯವರಿಗೆ ಎದುರಾಗುವ ಸಮಸ್ಯೆಗಳು ನಿವಾರಣೆಯಾಗಲಿ ಹಾಗೂ ಭಾರತ ವಿಶ್ವಗುರುವಾಗಿ ಬೆಳೆಯುವ ಮೂಲಕ ಎಲ್ಲರಿಗೂ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಸಿದ್ಧಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಪ್ರಭಾಕರ ಎಚ್. ಹುಲಿಮೇರು, ಸಹಕಾರ ಸಂಘದ ನಿರ್ದೇಶಕರಾದ ರಾಜೇಶ್ ಶೆಟ್ಟಿ ಕೊನೆರಬೆಟ್ಟು, ದಿನೇಶ್ ಪೂಜಾರಿ ಹುಲಿಮೇರು, ಬಿಜೆಪಿ ಬೆಳ್ತಂಗಡಿ ಮಂಡಲ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಆಶಾ ಎಸ್. ಶೆಟ್ಟಿ, ಬೆಳ್ತಂಗಡಿ ಮಂಡಲ ಆರಂಬೋಡಿ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಸುರೇಂದ್ರ ಶೆಟ್ಟಿ ಅಜ್ಜಾಡಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ನರೇಂದ್ರ ಮೋದಿ ಅಭಿಮಾನಿಗಳು ಉಪಸ್ಥಿತರಿದ್ದರು.






