ಉಡುಪಿ: 30 ಅಡಿ ಆಳದ ಬಾವಿಗೆ ಆಕಸ್ಮಿಕವಾಗಿ ಬಿದ್ದ ಪತ್ನಿಯನ್ನು ರಕ್ಷಿಸಲು 65 ವರ್ಷದ ಪತಿಯೊಬ್ಬರು ಜೀವದ ಹಂಗು ತೊರೆದು ಬಾವಿಗೆ ಹಾರಿದ ಘಟನೆ ಕೆಮ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜು ಸಮೀಪ ಜೂನ್ 3 ರಂದು ನಡೆದಿದೆ.
ಕೆಮ್ಮಣ್ಣು ನಿವಾಸಿಗಳಾದ 65 ವರ್ಷದ ಗೋಪಾಲಕೃಷ್ಣ ಹಾಗೂ 60 ವರ್ಷದ ಶ್ಯಾಮಲಾ ರಕ್ಷಿಸಲ್ಪಟ್ಟ ದಂಪತಿಯಾಗಿದ್ದಾರೆ.

ಬಟ್ಟೆ ಒಗೆಯುವ ವೇಳೆ ನೀರು ಸೇದಲು ಹೋದ ಶ್ಯಾಮಲಾ ಅವರು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದಿದ್ದಾರೆ. ಪತ್ನಿ ಅಪಾಯದಲ್ಲಿರುವುದನ್ನು ಕಂಡ ಗೋಪಾಲಕೃಷ್ಣ ಅವರು ಕ್ಷಣಮಾತ್ರವೂ ಯೋಚಿಸದೆ ಬಾವಿಗೆ ಹಾರಿ ರಕ್ಷಣೆಗೆ ಮುಂದಾಗಿದ್ದಾರೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಈಶ್ವರ ಮಲ್ಪೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಹಗ್ಗದ ನೆರವಿನಿಂದ ದಂಪತಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ.
ಅಸ್ವಸ್ಥಗೊಂಡಿದ್ದ ಇಬ್ಬರನ್ನೂ ತಕ್ಷಣ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


