ಬೆಂಗಳೂರು: ಸಮಾಜದ ಏಳಿಗೆಗಾಗಿ ಯುವವಾಹಿನಿ ಸಂಸ್ಥೆಯು ಕೈಗೊಳ್ಳುತ್ತಿರುವ ವಿವಿಧ ಸೇವಾ ಚಟುವಟಿಕೆಗಳು ಶ್ಲಾಘನೀಯವಾಗಿದ್ದು, ಸಂಘಟನೆಯ ಕಾರ್ಯವೈಖರಿ ಮೆಚ್ಚುವಂತದ್ದು ಎಂದು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟಿದ್ದಾರೆ.

ಏ. 11 ರಂದು ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ “ಕೃಷ್ಣಾ” ದಲ್ಲಿ ಯುವವಾಹಿನಿಯ ಪ್ರಮುಖರ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿತು.

ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಂಸ್ಥೆ ಮಾಡುತ್ತಿರುವ ಕಾರ್ಯಗಳ ಕುರಿತು ವಿವರಿಸಿ, ಸಂಸ್ಥೆಯ ಸಾಧನೆಗಳನ್ನು ಒಳಗೊಂಡ ಕಿರು ಹೊತ್ತಗೆಯನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಲಾಯಿತು.

ಸಂಸ್ಥೆಯ ಸಮಾಜಮುಖಿ ಕಾರ್ಯಗಳ ಬಗ್ಗೆ ಮುಖ್ಯಮಂತ್ರಿಗಳು ಹರ್ಷ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸೇವಾ ಮನೋಭಾವವನ್ನು ಮುಂದುವರಿಸಲು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು, ಸಾಂಸ್ಕೃತಿಕ ನಿರ್ದೇಶಕ ದಿನೇಶ್ ಸುವರ್ಣ ರಾಯಿ, ಸಾಮಾಜಿಕ ಜಾಲತಾಣ ಸಂಪಾದಕ ರಾಜೇಶ್ ಸುವರ್ಣ, ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು, ಸಾಂಸ್ಕೃತಿಕ ನಿರ್ದೇಶಕ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಸಾಮಾಜಿಕ ಮುಂದಾಳು ಪ್ರಸನ್ನ ಅರಕಲಗೂಡು ಸೇರಿದಂತೆ ಹಲವರು ಉಪಸ್ಥಿತರಿದ್ದರು.


