ಮೈಸೂರು: ದಾಸವಾಳ ಹೂ ನುಂಗಿದ ಪರಿಣಾಮ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಮೃತಪಟ್ಟ ದುರ್ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡಹೆಜ್ಜೂರು ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟ ಮಗುವನ್ನು ದೊಡ್ಡಹೆಜ್ಜೂರು ನಿವಾಸಿಗಳಾದ ಸುದರ್ಶನ್–ನವ್ಯ ದಂಪತಿಯ ಎರಡನೇ ಪುತ್ರ ಚಿನ್ಮಯಿಗೌಡ ಎಂದು ಗುರುತಿಸಲಾಗಿದೆ.

ಮನೆಯ ಹೊಸಲಿನಲ್ಲಿ ಪೂಜೆಗೆ ಇರಿಸಿದ್ದ ದಾಸವಾಳ ಹೂವನ್ನು ಮಗು ಬಾಯಿಗೆ ಹಾಕಿಕೊಂಡಿದೆ. ಈ ವೇಳೆ ಅಣ್ಣ ಕಿತ್ತುಕೊಳ್ಳುವ ಭಯದಿಂದ ಮಗು ಒಣಗಿದ ಹೂವನ್ನು ನುಂಗಿದ್ದು, ಉಸಿರಾಟದ ತೊಂದರೆಯಿಂದ ಅಸ್ವಸ್ಥಗೊಂಡಿದೆ.

ತಕ್ಷಣವೇ ಮಗುವನ್ನು ಹನಗೋಡು ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.






