ಮಂಗಳೂರು: ಉಳ್ಳಾಲ ತಾಲೂಕಿನ ಕುತ್ತಾರು ಪದವಿನ ಸಾಲತ್ ನಗರದಲ್ಲಿ ಹೊಸ ಬಾವಿ ತೋಡುವ ವೇಳೆ ಮಣ್ಣು ತುಂಬಿದ ಕಬ್ಬಿಣದ ಬಕೆಟ್ ತಲೆಗೆ ಬಿದ್ದು ಕಾರ್ಮಿಕನೋರ್ವ ಮೃತಪಟ್ಟ ಘಟನೆ ಮಾ. 27 ರಂದು ನಡೆದಿದೆ.

ಮೃತಪಟ್ಟವರನ್ನು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಲ್ಲಾಪುರ ಮೂಲದ ಶಿವಕುಮಾರ್ ಜಿ.ಕೆ (30) ಎಂದು ಗುರುತಿಸಲಾಗಿದೆ.

ಮಾ. 27 ರಂದು ಸಂಜೆ ಕುತ್ತಾರಿನ ಸಾಲತ್ ನಗರದ ಖಾಲಿ ಜಾಗವೊಂದರಲ್ಲಿ ಹೊಸ ಬಾವಿ ತೋಡುವ ಕೆಲಸ ನಡೆಯುತ್ತಿತ್ತು. ಶಿವಕುಮಾರ್ ಸೇರಿದಂತೆ ಮೂವರು ಕಾರ್ಮಿಕರು ಸುಮಾರು 30 ಅಡಿ ಆಳದ ಬಾವಿಯೊಳಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಕ್ರೇನ್ ಮೂಲಕ ಬಾವಿಯೊಳಗಿನ ಮಣ್ಣನ್ನು ಕಬ್ಬಿಣದ ಬಕೆಟ್ನಲ್ಲಿ ಮೇಲಕ್ಕೆತ್ತುತ್ತಿದ್ದಾಗ, ಹುಕ್ನಿಂದ ಕಳಚಿಕೊಂಡ ಬಕೆಟ್ ನೇರವಾಗಿ ಶಿವಕುಮಾರ್ ಅವರ ತಲೆಯ ಮೇಲೆ ಬಿದ್ದಿದೆ.

ಗಂಭೀರವಾಗಿ ಗಾಯಗೊಂಡ ಶಿವಕುಮಾರ್ ಅವರನ್ನು ತಕ್ಷಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ದಾರಿಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬಾವಿಯೊಳಗಿದ್ದ ಇತರ ಇಬ್ಬರು ಕಾರ್ಮಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.





