ಉಳ್ಳಾಲ: ತಾಲೂಕಿನ ನರಿಂಗಾನ ಗ್ರಾಮದ ಕಲ್ಲರಕೋಡಿ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಶಿವಮೊಗ್ಗ ಮೂಲದ ವ್ಯಕ್ತಿ ನಾಪತ್ತೆಯಾದ ಘಟನೆ ನಡೆದಿದೆ.

ನಾಪತ್ತೆಯಾದ ವ್ಯಕ್ತಿಯನ್ನು ಶಿವಮೊಗ್ಗ ಜಿಲ್ಲೆಯ ಕೋಟೆ ಗಂಗೂರು ನಿವಾಸಿ ಮೊಹಮ್ಮದ್ ಅರ್ಷದ್ (30) ಎಂದು ಗುರುತಿಸಲಾಗಿದೆ.

ಗಾರೆ ಕೆಲಸ ಮಾಡುತ್ತಿದ್ದ ಅರ್ಷದ್ ಅವರು ಪತ್ನಿಯೊಂದಿಗೆ ನರಿಂಗಾನ ಗ್ರಾಮದ ಕಲ್ಲರಕೋಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇವರ ಪುತ್ರಿ ಶಿವಮೊಗ್ಗದಲ್ಲಿ ಪತ್ನಿಯ ತಾಯಿ ಮನೆಯಲ್ಲಿ ವಾಸವಾಗಿದ್ದಾಳೆ.

ಮಾ. 23 ರಂದು ಕೆಲಸ ಮುಗಿಸಿ ಮನೆಗೆ ಬಂದ ಅರ್ಷದ್ ಅವರು, ಪುತ್ರಿಯನ್ನು ನೋಡಲು ಶಿವಮೊಗ್ಗಕ್ಕೆ ಹೋಗುವುದಾಗಿ ಪತ್ನಿಗೆ ತಿಳಿಸಿ ಮನೆ ಬಿಟ್ಟಿದ್ದಾರೆ. ಶಿವಮೊಗ್ಗ ತಲುಪಿದ ಬಳಿಕ ಕರೆ ಮಾಡುವುದಾಗಿ ತಿಳಿಸಿದ್ದಾರೆ.

ಆದರೆ ಮಾ. 24 ರಂದು ಬೆಳಿಗ್ಗೆ ಅವರಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪತ್ನಿ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿರುವುದು ಗಮನಕ್ಕೆ ಬಂದಿದೆ. ಬಳಿಕ ಶಿವಮೊಗ್ಗದಲ್ಲಿರುವ ಅವರ ತಾಯಿಯನ್ನು ಸಂಪರ್ಕಿಸಿದಾಗ ಅರ್ಷದ್ ಅಲ್ಲಿಗೂ ಬಂದಿಲ್ಲ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪತ್ನಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.




