ಸುಳ್ಯ: ಸಂಚಾರ ನಿಯಮವನ್ನು ಪದೇ ಪದೆ ಉಲ್ಲಂಘಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬರಿಗೆ ಸುಳ್ಯ ನ್ಯಾಯಾಲಯವು ವಿಶೇಷ ಶಿಕ್ಷೆ ಪ್ರಕಟಿಸಿದೆ.
ಸುಳ್ಯ ನಿವಾಸಿ ರಕ್ಷಿತ್ ಜಿ. ಶಿಕ್ಷೆಗೆ ಒಳಗಾದ ಆರೋಪಿಯಾಗಿದ್ದಾರೆ.


ರಕ್ಷಿತ್ ಜಿ. ಸುಳ್ಯ ಪೇಟೆಯಲ್ಲಿ ಮಾರ್ಚ್ 12 ರಂದು ಹಲವು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದ ಆರೋಪದ ಮೇಲೆ ಸುಳ್ಯ ಪೊಲೀಸರು ಆತನ ವಿರುದ್ಧ ಭಾರತೀಯ ಮೋಟಾರು ವಾಹನ ಕಾಯಿದೆ ಅಡಿಯಲ್ಲಿ ಮೂರು ಲಘು ಪ್ರಕರಣವನ್ನು ಪ್ರತ್ಯೇಕವಾಗಿ ದಾಖಲಿಸಿದ್ದರು. ಈ ಬಗ್ಗೆ ಸುಳ್ಯದ ಎಸ್ ಸಿ ಜೆ ಮತ್ತು ಜೆ ಎಮ್ ಎಫ್ ಸಿ ನ್ಯಾಯಾಲಯಕ್ಕೆ ಸುಳ್ಯ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಸಂತೋಷ್ ಬಿ.ಪಿ. ಅವರು ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗೆ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಒಟ್ಟು ಮೂರು ಸಾವಿರ ರೂಪಾಯಿ ದಂಡವನ್ನು ಹಾಗೂ ಮೂರೂ ಪ್ರಕರಣಗಳಲ್ಲಿ ತಲಾ ಐದು ದಿನಗಳಂತೆ ಮಾರ್ಚ್ 15 ರಿಂದ ಮಾರ್ಚ್ 29 ರವರೆಗೆ ಒಟ್ಟು 15 ದಿನಗಳ ಕಾಲ ಸಮುದಾಯ ಸೇವೆಯನ್ನು ನಿರ್ವಹಿಸುವಂತೆ ಆದೇಶಿಸಿದೆ. ಜೊತೆಗೆ ಚಾಲನಾ ಪರವಾನಿಗೆಯನ್ನು ಮೂರು ತಿಂಗಳ ಕಾಲ ಅಮಾನತಿನಲ್ಲಿಡಲು ನ್ಯಾಯಾಲಯ ಆದೇಶಿಸಿದೆ.

ಸಮುದಾಯ ಸೇವೆ ಶಿಕ್ಷೆ ಎಂದರೇನು?
ಸಮುದಾಯ ಸೇವೆ ಅಂದರೆ ಆರೋಪಿ ರಕ್ಷಿತ್ ಜಿ. ಸಂಚಾರ ನಿಯಮಗಳನ್ನು ಒಳಗೊಂಡ ಫಲಕಗಳನ್ನು ಹಿಡಿದು ಸುಳ್ಯ ಪೇಟೆಯ ಜಂಕ್ಷನ್ ಗಳಲ್ಲಿ ನಿಂತು ಸಾರ್ವಜನಿಕರಿಗೆ ಸಂಚಾರ ನಿಯಮ ಪಾಲನೆಯ ಅರಿವನ್ನು ಮೂಡಿಸಬೇಕಾಗಿದೆ.


