ಬಂಟ್ವಾಳ: ಪುಟಾಣಿ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ಒದಗಿಸುವ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ಹಾಗೂ ಉತ್ತಮ ಕಲಿಕೆಗಳು ಸಿಗುತ್ತಿದ್ದು ಇದರ ಜೊತೆಗೆ ನಿಶ್ಚಿಂತೆಯ ವಾತಾವರಣ ಮಕ್ಕಳ ಮಾನಸಿಕ ಸಮಸ್ಯೆ ಹಾಗೂ ದೈಹಿಕ ಸಮಸ್ಯೆಗಳನ್ನು ಹೋಗಲಾಡಿಸುವ ವ್ಯವಸ್ಥೆಯನ್ನು ಕಲ್ಪಿಸುತ್ತದೆ ಎಂದು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಹೇಳಿದರು.

ಅವರು ಬಂಟ್ವಾಳ ತಾಲೂಕು ಸಂಗಬೆಟ್ಟು ಗ್ರಾಮದ ಸಂಗಬೆಟ್ಟು ಬಾಕಿಮಾರ್ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಬಂಟ್ವಾಳದಲ್ಲಿ ಇರುವ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ವಿಶಿಷ್ಟ ರೀತಿಯಲ್ಲಿ ಮಾದರಿ ಅಂಗನವಾಡಿ ಕೇಂದ್ರಗಳನ್ನಾಗಿ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.

ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮುಮ್ತಾಜ್ ಎಚ್ ಟಿ ಮಾತನಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಐಸಿಡಿಎಸ್ ಕಾರ್ಯಕ್ರಮಗಳ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಇಲಾಖೆಯು ಅಂಗನವಾಡಿ ಕೇಂದ್ರಗಳ ಮೂಲಕ ಮಹಿಳೆಯರಿಗೆ ಸಬಲೀಕರಣಕ್ಕೆ ಅತ್ಯಂತ ಹೆಚ್ಚು ಮಹತ್ವ ನೀಡಲಾಗುತ್ತಿದ್ದೂ ಭಾಗ್ಯಲಕ್ಮಿ ಯೋಜನೆಯಿಂದ ಮಕ್ಕಳ ಉನ್ನತ ವ್ಯಾಸಂಗಕ್ಕೆ ತುಂಬಾ ಅನುಕೂಲವಾಗಿದೆ. ಗೃಹ ಲಕ್ಶ್ಮೀ ಯೋಜನೆ ಮೂಲಕ ಮನೆಯ ಗ್ರಹಿಣಿಗೆ ಶಕ್ತಿ ನೀಡಲಾಗಿದೆ. ಅದರಂತೆ ಮಾತೃವಂದನಾ, ಸುಕನ್ಯಾ ಸಮೃದ್ದಿ ಯೋಜನೆ ಹಾಗೂ ಗರ್ಭಿಣಿಯರಿಗೆ, ಬಾಣಂತಿಯಾರಿಗೆ ಉಚಿತ ಪೌಷ್ಟಿಕ ಆಹಾರ ನೀಡುವ ಮೂಲಕ ಮಹಿಳೆಯರ ಸಂಘಟನೆ ಮತ್ತು ಒಗ್ಗಟ್ಟಿಗೆ ಅಂಗನವಾಡಿ ಕೇಂದ್ರ ಬಿಂದುವಾಗಿ ಸೇವೆ ಸಲ್ಲಿಸುತ್ತಿದೆ ಎಂದರು.

ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಮಾತನಾಡಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಶಾಲೆಯ ಬಿಸಿ ಊಟ ತಯಾರಕರು ಸರಕಾರ ನೀಡುವ ಸಣ್ಣ ಮಟ್ಟದ ಗೌರವಧನಕ್ಕೆ ಗರಿಷ್ಠ ಮಟ್ಟದ ಸೇವೆಯನ್ನು ನೀಡುವ ಮೂಲಕ ಸಮಾಜದ ಕಣ್ಣುಗಳ ಗೌರವಕ್ಕೆ ಅರ್ಹರಾಗಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡಿರುವ ಮೇರಿ ಎಲ್ವಿರಾ ಫಲೇರಾ ಜೇನಿತಾ ಹಾಗೂ ಸಹಾಯಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಸರಸ್ವತಿ, ಲಲಿತ, ಪದ್ಮಾವತಿ ರವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಸಿದ್ದಕಟ್ಟೆ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ರತ್ನಕುಮಾರ್ ಚೌಟ, ಬಾಲ ವಿಕಾಸ ಸಮಿತಿಯ ಸದಸ್ಯರೂ, ನಿವೃತ್ತ ಶಿಕ್ಷಕರಾದ ದಾಮೋದರ ರಾವ್, ಸಂಗಬೆಟ್ಟು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಉಮೇಶ್ ಕಿರಣ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮಾ ನಾಯ್ಕ್, ಪ್ರಮುಖರಾದ ನಾರಾಯಣ ಪೂಜಾರಿ ಉಪಸ್ಥಿತರಿದ್ದರು.

ಬಾಲ ವಿಕಾಸ ಸಮಿತಿಯ ಅಧ್ಯಕ್ಷರಾದ ಭವ್ಯಶ್ರೀ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಸಂಗಬೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ ಅಲಕ್ಕೆ, ಉಪಾಧ್ಯಕ್ಷರಾದ ಸುರೇಶ್ ಕುಲಾಲ್, ವಿಮಲಾ ಮೋಹನ್, ಜಲಜ ಹರೀಶ್ ಕುಂದರ್, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಸುನೀಲ್ ಶೆಟ್ಟಿಗಾರ್, ಸಂದೇಶ ಶೆಟ್ಟಿ, ದಾಮೋದರ ಪೂಜಾರಿ, ಮಾದವ ಶೆಟ್ಟಿಗಾರ್,ಉದಯ ಪೂಜಾರಿ, ಭೋಜ ಶೆಟ್ಟಿಗಾರ್ ರೋಹಿತ್,ಲೋಕೇಶ್ ಪೂಜಾರಿ ಯಶೋದಾರ್ ಶೆಟ್ಟಿಗಾರ್,ಪ್ರೇಮಾ, ಪ್ರಮುಖರಾದ ಚಂದ್ರಹಾಸ್ ಶೆಟ್ಟಿಗಾರ್, ವಿಶ್ವನಾಥ್ ಶೆಟ್ಟಿಗಾರ್, ನವೀನ ಹೆಗ್ಡೆ,ದೀಪಕ್ ಶೆಟ್ಟಿಗಾರ್,ಉದಯ ಶೆಟ್ಟಿಗಾರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ನೀತಾ, ಕಟ್ಟಡ ಗುತ್ತಿಗೆದಾರ ಉಮೇಶ್ ಗೌಡ ಅಂಗನವಾಡಿ ಸಹಾಯಕಿ ಸವಿತಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಅಂಗನವಾಡಿ ಕಾರ್ಯಕರ್ತೆ ಶಾರದಾ ಅಂಗನವಾಡಿ ವರದಿ ವಾಚಿಸಿದರು , ಗ್ರಾಮ ಪಂಚಾಯತ್ ಕಾರ್ಯದರ್ಶಿ ರೋಹಿಣಿ ಶೆಟ್ಟಿ ಸ್ವಾತಿಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾ ಇಲಾಖೆಯ ಎಸಿಡಿಪಿಓ ಶಾಲಿನಿ ವಂದಿಸಿದರು. . ಸಂಗಬೆಟ್ಟು ಗ್ರಾಮ ಪಂಚಾಯತ್ ಸಿಬ್ಬಂದಿ ಪ್ರಜ್ವಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.


