Breaking
22 Mar 2026, Sun

ರಸ್ತೆ ದುರಾವಸ್ಥೆ: ನಾನಾ ವಾಹನ ಮಾಲಕರ ಸಂಘಗಳಿಂದ ರಸ್ತೆ ತಡೆ ಪ್ರತಿಭಟನೆ

ವಿಟ್ಲ: ಆಟೋ ರಿಕ್ಷಾ, ಟೂರಿಸ್ಟ್ ಕಾರು, ಖಾಸಗಿ ಬಸ್, ಲಾರಿ ಮಾಲಕರ ಸಂಘದ ವತಿಯಿಂದ ಸಂಚಾರ ಅಯೋಗ್ಯವಾಗಿರುವ ವಿಟ್ಲ-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ರಸ್ತೆಯ ಅಭಿವೃದ್ಧಿಗೆ ಆಗ್ರಹಿಸಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರು ರಾಜ್ಯ ಸರಕಾರದ ವಿರುದ್ಧ ಘೋಷಣೆ ಹಾಕಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಆರಂಭಿಸಿ, ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವ ತನಕ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ ಸ್ಥಳಕ್ಕಾಗಮಿಸಿದ ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರತಿಭಟನಾ ಕಾರರು ರಸ್ತೆ ದುರಾವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ರಸ್ತೆ ಹೊಂಡಗಳನ್ನು ಮುಚ್ಚಿ ದುರಸ್ತಿಗೊಳಿಸುವಂತೆ ಒತ್ತಾಯಿಸಿದರು. ಈ ವೇಳೆ ಅಧಿಕಾರಿಗಳು ಮಾತನಾಡಿ ದುರಸ್ತಿ ಕಾಮಗಾರಿ ಬಗೆಗಿನ ಪ್ರಸ್ತಾವನೆಯನ್ನು ಈಗಾಗಲೇ ಕಳುಹಿಸಿಕೊಡಲಾಗಿದೆ. ಕೆಲವೇ ದಿನಗಳಲ್ಲಿ ಈ ಭಾಗದ ಡಾಮರೀಕರಣ ಆರಂಭಗೊಳ್ಳಲಿದೆ ಎಂದರು. ಈ ವೇಳೆ ಮತ್ತಷ್ಟು ಕೆರಳಿದ ಪ್ರತಿಭಟನಾಕಾರರು ಮೂರು ದಿನದೊಳಗೆ ರಸ್ತೆ ಹೊಂಡವನ್ನು ಮುಚ್ಚದಿದ್ದಲ್ಲಿ ವಿಟ್ಲ ನಾಲ್ಕು ಮಾರ್ಗದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಗುವುದು ಎಂದರು.

ಬಳಿಕ ಪ್ರತಿಭಟನಾಕಾರರ‌ನ್ನು ಸಮಾಧಾನ ಪಡಿಸಿದ ಅಧಿಕಾರಿಗಳು ಕೂಡಲೇ ಹೊಂಡಮುಚ್ಚುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆದರು.

ರಸ್ತೆ ತಡೆದು ಪ್ರತಿಭಟನೆ ಮಾಡಿದ ಪರಿಣಾಮ ಸುಮಾರು ಅರ್ಧ ತಾಸು ವಾಹನ ಸಂಚಾರ ಸ್ಥಗಿತಗೊಂಡು ವಾಹನಗಳ ಸಾಲು ಮೈಲುಗಟ್ಟಲೆ ಉದ್ದವಾಗಿತ್ತು. ವಿಟ್ಲ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.

ಪ್ರತಿಭಟನೆಯಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ನಾಯ್ತೋಟು, ಬಸ್ ಮಾಲಕರಾದ ಅರುಣ್ ವಿಟ್ಲ,ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ರವಿಪ್ರಕಾಶ್ ವಿಟ್ಲ, ಲಾರಿ ಮಾಲಕ ಚಾಲಕ ಸಂಘದ ಅಧ್ಯಕ್ಷರಾದ ರಮೇಶ್ ವರಪ್ಪಾದೆ, ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರಾದ ವಸಂತ ಎನ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಉದಯಕುಮಾರ್ ಆಲಂಗಾರು, ಪ್ರಮುಖರಾದ‌ ಕೃಷ್ಣಯ್ಯ ವಿಟ್ಲ, ಬಿಜೆಪಿ ಪಕ್ಷದ ಪ್ರಮುಖರಾದ ಮೋಹನದಾಸ್ ಉಕ್ಕುಡ, ನರಸಪ್ಪ ಪೂಜಾರಿ, ಸದಾನಂದ ಗೌಡ ಸೇರಾಜೆ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಹರೀಶ್, ಜಯಂತ್, ವಸಂತ, ರಿಕ್ಷಾ ಮಾಲಕರಾದ ವೆಂಕಪ್ಪ ನಾಯ್ಕ್ , ಭಾಸ್ಕರ್, ಲಾರಿ ಮಾಲಕರಾದ ಜಯಪ್ರಕಾಶ್ , ಹರೀಶ್ ಪೂಜಾರಿ , ನಾಗೇಶ್ ಬಸವನಗುಡಿ ಸೇರಿದಂತೆ ನೂರಾರು ನಾಗರಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *