ಶಿವತತ್ವದಿಂದ ಜಾಗತಿಕ ಶಾಂತಿ ಸಾಧ್ಯ: ಆಧ್ಯಾತ್ಮಿಕ ಚಿಂತಕ ಉಮೇಶನಾಥ ಆಚಾರ್
ಮಂಗಳೂರು: ಉರ್ವಸ್ಟೋರ್ ಸಮೀಪದ ಮಂಗಳೂರು ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿದ್ಯಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪ್ರಾರ್ಥನೆ ಕಾರ್ಯಕ್ರಮವು ಫೆ. 8 ರಂದು ನಡೆಯಿತು.

ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಕದ್ರಿ ಭದ್ರಕಾಳಿ ದೇವಸ್ಥಾನದ ಅರ್ಚಕ, ಆಧ್ಯಾತ್ಮಿಕ ಚಿಂತಕ ಉಮೇಶನಾಥ ಆಚಾರ್ ಅವರು ಜೀವನದಲ್ಲಿ ಆತ್ಮಜ್ಞಾನ ಮತ್ತು ಧ್ಯಾನದ ಜೊತೆಗೆ ಶಿವತತ್ವ ಪಾಲನೆಯಿಂದ ಜಗತ್ತಿಗೆ ಶಾಂತಿ ಸಿಗಲು ಸಾಧ್ಯವಿದೆ ಎಂದರು.

ಸಂಸ್ಥೆಯ ಸಂಚಾಲಕಿ ಬ್ರಹ್ಮ ಕುಮಾರಿ ವಿಶ್ವೇಶ್ವರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಧ್ಯಾನದ ಮೂಲಕ ಮನಸ್ಸಿನ ಅಶಾಂತಿ, ಒತ್ತಡ ಮತ್ತು ನಕಾರಾತ್ಮಕ ಚಿಂತನೆಗಳಿಂದ ಮುಕ್ತರಾಗಲು ಸಾಧ್ಯವಿದೆ’ ಎಂದರು.
ಪ್ರಮುಖರಾದ ಯು. ತಿಮ್ಮಪ್ಪ, ಕಮಲಾಕ್ಷ, ಮಂಜುನಾಥ ಆಚಾರ್, ಚಂಚಲಾ ತೇಜೋಮಯಿ, ಎಂಜಿನಿಯರ್ ಶರತ್ ಕುಮಾರ್, ಪತ್ರಕರ್ತ ಶ್ರೀ ಮೋಹನ್ ಕೆ. ಶ್ರೀಯಾನ್ ರಾಯಿ, ಉದ್ಯಮಿ ವಸಂತ ಸುಭಾಷ್, ನಿಶಾನ್ ಬಂಗೇರ ಶುಭ ಹಾರೈಸಿದರು. ಇದೇ ವೇಳೆ ಧ್ಯಾನ ಮತ್ತು ಆಧ್ಯಾತ್ಮಿಕತೆಯ ಮಹತ್ವದ ಬಗ್ಗೆ ಮಾರ್ಗದರ್ಶನ ನೀಡಲಾಯಿತು.

ಈ ವೇಳೆ ಸುಮಾರು 100ಕ್ಕೂ ಅಧಿಕ ಮಂದಿ ಭಕ್ತರು ಭಾಗವಹಿಸಿ, ಸಾಮೂಹಿಕ ಪ್ರಾರ್ಥನೆ ಮತ್ತು ಸಹಭೋಜನದಲ್ಲಿ ಪಾಲ್ಗೊಂಡಿದ್ದರು. ಸಂಸ್ಥೆ ಸಂಚಾಲಕಿ ಪ್ರಾಸ್ತಾವಿಕ ಮಾತನಾಡಿದರು. ಬಿ.ಕೆ. ರೋಷನ್ ಸ್ವಾಗತಿಸಿ, ವಂದಿಸಿದರು. ಬಿ.ಕೆ. ಅಂಬಿಕಾ ಮತ್ತು ಬಿ.ಕೆ. ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.







