ಬಂಟ್ವಾಳ: ಪಂಚಾಯತ್ ರಾಜ್ ಇಲಾಖೆಯ ಇ-ಸ್ವತ್ತನ್ನು ಹೊಸ ತಂತ್ರಾಂಶ ಆಳವಡಿಸುವ ಸರಕಾರದ ಯೋಚನೆಯಿಂದಾಗಿ ಗ್ರಾಮ ಪಂಚಾಯತ್ ಗಳಲ್ಲಿ 9 &11ಎ ,11ಬಿ ಸಂಬಂದಿತ ಖಾತೆಗಳನ್ನು ಪಡೆಯಲು ಅರ್ಜಿ ಸಲ್ಲಿಸಿರುವ ಸಾವಿರಾರು ಮಂದಿ ಸಂಕಷ್ಟದ ಸಿಲುಕಿದ್ದಾರೆ.

ಕರಾವಳಿ ಜಿಲ್ಲೆಗಳ ಪ್ರತಿ ಗ್ರಾಮ ಪಂಚಾಯತ್ ಗಳಲ್ಲಿ ನೂರಾರು ಅರ್ಜಿಗಳು ವಿಲೇವಾರಿಯಾಗದೇ ಸಂಬಂಧಿತ ಜನರು ಕಂಗಲಾಗಿದ್ದಾರೆ. ಹಳೆಯ ತಂತ್ರಾಂಶ ಮತ್ತು ಹೊಸ ತಂತ್ರಾಂಶ ಇವುಗಳ ಬಗ್ಗೆ ಯಾವುದೇ ಅರಿವು ಇಲ್ಲದಿರುವ ಗ್ರಾಮೀಣ ಭಾಗದ ಜನರು ಖಾತೆ ಪಡೆಯುವ ಉದ್ದೇಶದಿಂದ ದಿನಂಪ್ರತಿ ಗ್ರಾಮ ಪಂಚಾಯತ್ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸದೇ ಅರ್ಜಿದಾರರಿಗೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ.

ಈ ಹಿನ್ನಲೆಯಲ್ಲಿ ಹೊಸ ತಂತ್ರಾಂಶ ಆಳವಡಿಸಲು ಧೀರ್ಘ ಸಮಯವಕಾಶ ಬೇಕಾಗಿರುವುದರಿಂದ ವಿಲೇವಾರಿ ಮಾಡಿ ಖಾತೆಗಳನ್ನು ವಿತರಿಸಲು ಅಗತ್ಯ ಕ್ರಮ ಜರುಗಿಸಲು ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರಿಗೆ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಅವರು ಮನವಿ ಸಲ್ಲಿಸಿದ್ದಾರೆ.





